Monday, December 9, 2024

 ತಾಳಿದವನು ಫಡ್ನವಿಸ್ ಆದಾನು.

ಅದು ೨೦೧೯ ರ ಸಮಯ ಉದ್ಧವ್ ಠಾಕ್ರೆ ತನ್ನನು ಮುಖ್ಯ ಮಂತ್ರಿ ಮಾಡಲಿಲ್ಲ ಎಂದು ಬಿ ಜೆ ಪಿ ಯ ಬಹು ಕಾಲದ ಗೆಳೆತನಕ್ಕೆ ಸೋಡಾ ಚೀಟಿ ಕೊಟ್ಟು ಹೊರಟಿದ್ದರು. ಇತ್ತ ಫಡ್ನವಿಸ್  ಅಜಿತ್ ಪವಾರರೊಡನೆ ಸೇರಿ ಮುಖ್ಯಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅಜಿತ್ ದಾದಾ ಯು ಟರ್ನ್ ಹೊಡೆದು ಮತ್ತೆ ಶರದ್ ಪವಾರ್ ರೊಂದಿಗೆ ಸೇರಿ  ದಂಗು ಬಡಿಸಿದ್ದರು. ಆಗ ಅಂದು ಫಡ್ನವಿಸ್ ತುಂಬಿದ ಶಾಸನ ಸಭೆಯಲ್ಲಿ "ತೊರೆಗಳು ಹಿಂದೆ ಸರಿಯುತ್ತಿವೆ ಎಂದು ಕಿನಾರೆಯಲ್ಲಿ ಮನೆ ಕಟ್ಟಬೇಡ ನಾನು ಸಾಗರ ಮತ್ತೆ ಅಪ್ಪಳಿಸುತ್ತೇನೆ " ಎಂದು ಅಬ್ಬರಿಸಿದ್ದರು. ಅಂತೆಯೇ ದೇವೇಂದ್ರ ಸರಿತಾ ಗಂಗಾಧರ ಫಡ್ನವಿಸ್ ಇದೀಗ ಮತ್ತೊಮ್ಮೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಮಹಾರಾಷ್ಟ್ರದ ಚಾಣಕ್ಯ ನಾನೆ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ. ಫಡ್ನವಿಸ್ ತಂದೆ ಗಂಗಾಧರ ರಾವ್ ಫಡ್ನವಿಸ್ ವಿಧಾನ ಪರಿಷತ್ ಸದಸ್ಯರು ಹಾಗು ಜನಸಂಘದ ನೇತಾರರು ಆಗಿದ್ದರು ಅಲ್ಲದೆ ನಿತಿನ್ ಗಡ್ಕರಿ ಅವರ ರಾಜಕೀಯ ಗುರುಗಳು ಹೌದು. ಫಡ್ನವಿಸ್ ತನ್ನ ೧೭ ನೇ ವಯಸ್ಸಲ್ಲಿ ಅವರ ತಂದೆಯನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ತಂದೆಯ ರಾಜಕೀಯ ಪಟ್ಟುಗಳನ್ನು ಗಮನಿಸುವ ಸೌಭಾಗ್ಯ ಅವರದಾಗಲಿಲ್ಲ, ಆದರೆ ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಯಾರಿಂದಲೂ ತಡೆ ಒಡ್ಡಲಾಗಲಿಲ್ಲ. ೧೯ ನೇ ವಯಸ್ಸಿನಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಸಂಪರ್ಕಕ್ಕೆ ಬಂದು ರಾಜಕೀಯದ ಒಳ ಮರ್ಮವನ್ನು ಅರಿಯುವ ಹೆಜ್ಜೆ ಇಟ್ಟಿದ್ದರು. ಪರಿಣಾಮವಾಗಿ ತನ್ನ ೨೨ ನೇ ವಯಸ್ಸಿನಲ್ಲೇ ನಾಗ್ಪುರ್ ಕಾರ್ಪೊರೇಟರ್ ೨೭ ನೇ ವಯಸ್ಸಿಗೆ ನಾಗ್ಪುರ್ ಮೇಯರ್ ಗಾದಿ ಅರಸಿ ಬಂದಿದ್ದವು. ಹಾಗು ೨೯ ನೇ ವಯಸ್ಸಿಗೆ ಶಾಸಕನಾಗಿ ಆರಿಸಿ ಬಂದಿದ್ದರು. ಹೀಗೆ ರಾಜಕೀಯದ ಒಂದೊಂದೇ ಪಟ್ಟುಗಳನ್ನು ಕಲಿಯುತ್ತಿದ್ದಾಗ ಅವರಿಗೆ ಗುರುವಾಗಿ ನಿಂತದ್ದು ಗಡ್ಕರಿ ಎಂಬುದು ಗಮನಾರ್ಹ ಅಂಶ.

ಅದ್ಯಾರೋ ಮಹಾನುಭಾವರು ಹೇಳಿದ ನೆನಪು ಒಂದು ಹಂತದ ನಂತರ ಬೆಳೆಯುವ ಹಂಬಲ ಇರುವವನು ಗುರುವೆಂಬ ಗುರುವಿನ ನೆರಳಿನಿಂದಲೂ ದೂರ ಸಾಗಬೇಕಂತೆ ಬಹುಷಃ ಫಡ್ನವಿಸ್ ಇದನ್ನೇ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಗೋಪಿನಾಥ್ ಮುಂಡೆ ಹಾಗು ಗಡ್ಕರಿ ಬಣ ಎಂಬಂತೆ ಎರಡು ಬಣಗಳಾಗಿದ್ದವು. ಆಗ ಫಡ್ನವಿಸ್ ಯಾವ ಮಡಿವಂತಿಕೆಯು ಇಲ್ಲದೆ ಗೋಪಿನಾಥ್ ಮುಂಡೆ ಬಣಕ್ಕೂ ಹತ್ತಿರವಾಗಿದ್ದರು. ಖುದ್ದು ವಾಜಪೇಯಿ ಫಡ್ನವಿಸ್ ಕಾರ್ಯವೈಖರಿಯನ್ನು ಹೊಗಳಿದ್ದರು. ದಿನ ಕಳೆದಂತೆ ಫಡ್ನವಿಸ್ ಮಹಾರಾಷ್ಟ್ರದ ರಾಜ್ಯ ರಾಜಕೀಯದಲ್ಲಿ ಅವರಿಸಿಕೊಳ್ಳುತ್ತಿದ್ದರು, ಪರಿಣಾಮ ೨೦೧೪ ರಲ್ಲಿ ಮುಖ್ಯಮಂತ್ರಿ ಗದ್ದುಗೆ ತಾನಾಗಿಯೇ ಒಲಿದು ಬಂದಿತ್ತು. ಆದರೆ ೨೦೨೨  ರಲ್ಲಿ ಬದಲಾದ ಸನ್ನಿವೇಶದಲ್ಲಿ ಶಿಂಧೆ ನೇತ್ರತವಾದ ಶಿವಸೇನಾ ಹಾಗು ಬಿ ಜೆ ಪಿ ಮೈತ್ರಿ ಸರ್ಕಾರ ರಚನೆ ಆದಾಗ ಶಿಂದೆ ಮುಖ್ಯಮಂತ್ರಿ ಆದರು ಆದರೆ ಆಗಾಗಲೇ ಐದು ವರುಷಗಳ ಕಾಲ ಮುಖ್ಯ ಮಂತ್ರಿ ಆಗಿದ್ದ ಫಡ್ನವಿಸ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಉಪ್ಪಿಕೊಳ್ಳುವ ನಿರ್ದೇಶನ ದೆಹಲಿಯಿಂದ ಬಂದಿತ್ತು. ಆಗ ದೆಹಲಿ ದೊರೆಗಳ ಆದೇಶವನ್ನು ಪಕ್ಷಕ್ಕಾಗಿ ರಾಜ್ಯಕ್ಕಾಗಿ ಮರು ಮಾತಾಡದೆ ಒಪ್ಪಿ ಕೊಂಡಿದ್ದರು ಫಡ್ನವಿಸ್. ಆಗ ಹಲವು ಪತ್ರಿಕೆಗಳು , ಅಂಕಣಕಾರರು ಫಡ್ನವಿಸ್ ಉಪ ಮುಖ್ಯಮಂತ್ರಿ ಪದವಿಯನ್ನು ಒಪ್ಪಿ ಕೊಳ್ಳ ಬಾರದಿತ್ತು ಎಂದು ಬರೆದಿದ್ದವು ಆದರೆ ದೆಹಲಿ ದೊರೆಗಳಿಗೆ ಫಡ್ನವಿಸ್ ಹೊರತಾದ ಸರ್ಕಾರ ಕೇವಲ ಶಿಂಧೆ ಹಾಗು ಶಿವಸೇನಾ ಸರ್ಕಾರದ ವೈಭವೀಕರಣಕ್ಕೆ ಕಾರಣ ಆದೀತು ಎಂಬ ಭಯವಿತ್ತು. ೨೦೨೩ ರಲ್ಲಿ ಲೋಕಸಭಾ ಚುನಾವಣೆಯಲ್ಲಿ  ಮಹಾಯುತಿ ಸರಕಾರದ ನೀರಸ ಪ್ರದರ್ಶನವನ್ನು ತಮ್ಮ ಹೆಗಲ ಮೇಲೆ ಯಾವ ಅಂಜಿಕೆಯೂ ಇಲ್ಲದೆ ಹೊತ್ತು ಕೊಂಡಿದ್ದ ಫಡ್ನವಿಸ್ ಕೆಲವೇ ತಿಂಗಳಲ್ಲಿ ಲಾಡಕಿ ಬೆಹೆನ್ ಎಂಬ ವೋಟು ಬಾಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಳಿದವನು ಬಾಳಿಯಾನು ಎಂಬ ಗಾದೆಗೆ ಉಪಮೆಯಂತೆ ಮಹಾಯುತಿಯ ಗೆಲುವಿಗೆ ಕಾರಣವಾಗಿದ್ದರೆ.

ಹೀಗೆ ಫಡ್ನವಿಸ್ ರಾಜಕೀಯದ ಹಾದಿಯಲ್ಲಿ ತಾಳುವಿಕೆಯ ಮಹತ್ವವನ್ನು ಸಾರಿ ಸಾರಿ ಹೇಳುತಿದ್ದರೆ ಇತ್ತ ಕಾಂಗ್ರೆಸ್ ಮಾತ್ರ ಸಂವಿಧಾನ ಸಂಕಷ್ಟದಲ್ಲಿದೆ ಎಂಬ ಘೋಷ ವಾಕ್ಯವನ್ನೇ ವೇದ ವಾಕ್ಯ ಎಂದು ತಿಳಿದು ಲೋಕಸಭೆಯ ಫಲಿತಾಂಶ ವಿಧಾನಸಭೆಯಲ್ಲೂ ಮರುಕಳಿಸಬಹುದು ಎಂದು ನಂಬಿ ಕುಳಿತಂತಿತ್ತು. ಅದೇನೇ ಇರಲಿ ಭಾರತದ ಸಂವಿಧಾನ ಸಂಕಷ್ಟದಲ್ಲಿದೆಯೋ ಇಲ್ಲವೋ ಕಾಂಗ್ರೆಸ್ ನ ಸಂವಿಧಾನ ಸಂಕಷ್ಟದಲ್ಲಿರುವುದು ಸುಳ್ಳಲ್ಲ ಎಂಬುದು ಮಹಾರಾಷ್ಟ್ರದ ಚುನಾವಣೆಯ ನಂತರ ಮತ್ತೊಮ್ಮೆ ಸಾಬೀತಾಗಿದೆ. ಆದ್ದರಿಂದ ಕಾಂಗ್ರೆಸ್ ತನ್ನ ಪಕ್ಷದ ಸಂವಿಧಾನವನ್ನು ಮೊದಲು ಗಟ್ಟಿಗೊಳಿಸಬೇಕು. ತನಗಲ್ಲದ್ದಿದ್ದರು  ರಾಷ್ಟ್ರಕ್ಕಾಗಿ ರಾಷ್ಟ್ರದ ಹಿತ ದೃಷ್ಟಿಯಿಂದ ಪ್ರಭಲ ವಿರೋಧ ಪಕ್ಷವಿರುವುದು ರಾಷ್ಟ್ರಕ್ಕೆ ಒಳಿತು. ಆ ಕಾರಣಕ್ಕಾದರೂ ಕಾಂಗ್ರೆಸ್ ತನ್ನ ಕಾರ್ಯ ವೈಖರಿಯ ಬಗ್ಗೆ ಚುನಾವಣೆಗಳ ಬಗ್ಗೆ  ಗಮನ ಕೊಡಬೇಕು. ಹಾಗಾಗದಿದ್ದರೆ ಮತದಾರ ಮುಂದೊಂದು ದಿನ ಕಾಂಗ್ರೆಸ್    ಪಕ್ಷ ಖಾಯಂ ಸಂಕಷ್ಟದಲ್ಲಿರುವ  ಪಕ್ಷ ಎಂಬ ಫಲಕವನ್ನು ದಯಮಾಡಿಸುವ ಸಂಭವ ಅಲ್ಲ ಗೆಳೆಯುವಂತಿಲ್ಲ. ಇಲ್ಲದಿದ್ದರೆ ಹರಿಯಾಣದಲ್ಲಿ ಹರಿವಾಣದ ತಟ್ಟೆಯಲ್ಲಿ ಗೆಲುವೆಂಬ ಗಿಫ್ಟ್ ಅನ್ನು ಮತದಾರ ಕೊಡಬೇಕೆಂದಿದ್ದರು ಅದನ್ನು ಪಡೆದು ಕೊಳ್ಳುವ ಪರಿಯಲ್ಲಿ ವಿಫಲವಾಗುತ್ತಿರಲಿಲ್ಲ. ಕಾಂಗ್ರೆಸ್ ಅದೇ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದು ಓಲೈಕೆ ರಾಜಕಾರಣದ ಹಿಂದೆ ಬೆನ್ನು ಬಿದ್ದಿದ್ದೆ. ಅದೇ ರಾಜಕಾರವನ್ನು ವಿರೋಧಿಗಳು ಮಾಡಿಯಾರು ಎಂಬುದನ್ನು ಮರೆತಂತಿದೆ..

ಕಾಂಗ್ರೆಸ್ ನಾಯಕರು ಚುನಾವಣೆಗಳು ಬಂದಾಗ ಟೆಂಪಲ್ ರನ್ ಗಳನ್ನೂ ಮಾಡಿ ತಾವು ಪ್ರತಿಪಾದಿಸುವುದು ಸಾಫ್ಟ್ ಹಿಂದುತ್ವ  ಎಂಬಂತೆ ತೋರ್ಪಡಿಸಿಕೊಳ್ಳಲು ಪ್ರಯತ್ನಿಸುವುದು. ಆದರೆ  ರಾಮ ಮಂದಿರದಂತಹ ವಿಷಯಗಳಲ್ಲಿ ನೆಲದ  ಭಾವನೆಯನ್ನು ಅರ್ಥ ಮಾಡಿಕೊಳ್ಳದೆ ಬಹುಸಂಖ್ಯಾತರ ಭಾವನೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು. ಹೀಗೆ ತಮ್ಮಲೇ  ತಮ್ಮ ನಿಲುವಿನ ಬಗ್ಗೆ ವಿರೋಧಾಭಾಸಗಳನ್ನು ಹೊಂದುವುದು ಇದು ಮೊದಲಿನಿಂದಲೂ ನಡೆದು ಬಂದ ಪ್ರಕ್ರಿಯೆ. ಅಸಲಿಗೆ ಚುನಾವಣೆಗಳ ಮೇಲೆ ಜಾತಿಯ ಭೂತ ಹಾಗು ಸಂಪನ್ಮೂಲಗಳ ಸುರಿ ಮಳೆ ಆಗುವಾಗ ಮತದಾರನಿಗಾದರು ಯಾರು ಏನು ಮಾಡಿದರೆಂಬ ನೆನಪಿರುವುದಿಲ್ಲ.  ಆದರೆ ಕಾಂಗ್ರೆಸ್ ತನ್ನ ವರ್ತನೆಯಿಂದ ತಾನೊಬ್ಬ ಸನಾತನ ಧರ್ಮದ ಹಾಗು ಸಂತರ ವಿರೋಧಿಯೆಂದು ತನ್ನ ಕ್ರಿಯೆಗಳ ಮೂಲಕವೇ ಮತ್ತೆ ಮತ್ತೆ ಸಾಬೀತು ಪಡಿಸಿ ಮತದಾರರನ್ನು ತನ್ನ ಪಕ್ಷದ ನಿಲುವೇನು ಎಂದು  ಸದಾ ಜಾಗ್ರತಾವಸ್ತೆ ಯಲ್ಲಿ ಇಟ್ಟಿರುತ್ತದೆ. ಉದಾಹರಣೆಗೆ ಮೊನ್ನೆ ಮೊನ್ನೆ ಪೇಜಾವರದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ವಿಶ್ವ ಹಿಂದೂ ಪರಿಷದ್ ಏರ್ಪಡಿಸಿದ್ದ ಸಂತ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು. ಆ ಸಭೆಯಲ್ಲಿ  ಕೆಲವು  ನಿರ್ಣಯಗಳನ್ನು ವಿಶ್ವ ಹಿಂದೂ ಪರಿಷದ್ ತೆಗೆದುಕೊಂಡಿತ್ತು. ಅವುಗಳಲ್ಲಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ  ತಿದ್ದುಪಡಿ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುವುದು, ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವುದು ಹಾಗು ಪ್ರಚೋದಿತ   ಮತಾಂತರ ವನ್ನು ತಡೆಯುವುದು ಹೀಗೆ ಈ ಮೂರು ನಿರ್ಣಯಗಳನ್ನು ತೆಗೆದುಕೊಂಡು  ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದ್ದರು . ಆದರೆ ಶ್ರೀಗಳು ಸಂವಿಧಾನವನ್ನೇ ಬದಲಾಯಿಸಬೇಕೆಂಬ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂಬಂತೆ ಬಿಂಬಿಸಲಾಯಿತು. ಇದು ಯಾವ ನ್ಯಾಯ ? ಅಸಲಿಗೆ ಶ್ರೀಗಳು ಹೇಳಿದ್ದು ನಮ್ಮನು ಗೌರವಿಸುವ ಸರ್ಕಾರ ಬರಬೇಕು. ಹಾಗೆ ನೋಡಿದರೆ ಶ್ರೀಗಳು ಎಲ್ಲೂ ಸಂವಿಧಾನವನ್ನು ಬದಲಾಯಿಸಬೇಕೆಂದು  ಹೇಳಲಿಲ್ಲ. ಅವರು ಕೊಟ್ಟ ವಿನಂತಿ ಪತ್ರದಲ್ಲಿದ್ದ ಬೇಡಿಕೆಗಳನ್ನು  ಶಾಸನ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಹೊರಡಿಸಿಯೂ ಜಾರಿ ಮಾಡಬಹುದು, ಹೀಗೆ ಆಡದ ಮಾತಿಗೆ ಶ್ರೀಗಳ ಮೇಲೆ ವೃಥಾ ಆರೋಪ ಮಾಡಲಾಯಿತು .

ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ಹೇರಿದ ಸಂವಿಧಾನದ 42 ನೇ ತಿದ್ದುಪಡಿ ಕಾಯಿದೆಯನ್ನು ಮಿನಿ-ಸಂವಿಧಾನ ಎಂದೇ ಕರೆಯುತ್ತಾರೆ. ಅಂದರೆ  ತಿದ್ದುಪಡಿಗಳು ಒಂದು ಮಿನಿ ಸಂವಿಧಾನದಷ್ಟೇ ಇದ್ದವು ಎಂದು ಅರ್ಥ.  ಆದ್ದರಿಂದ ಸಂವಿಧಾನ ಬದಲಾಯಿಸಿದ್ದು ಯಾರು ಎಂದು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಸಂವಿಧಾನ ಬದಲಾವಣೆಗೂ ತಿದ್ದುಪಡಿಗೂ ಅಪಾರ ವ್ಯತಾಸವಿದೆ. ಇಲ್ಲಿಯವರೆಗೆ 106 ಬಾರಿ ಸಂವಿಧಾನದ ತಿದ್ದುಪಡಿಯಾಗಿದೆ, ಹಾಗೆಂದ ಮಾತ್ರಕ್ಕೆ ಇಡೀ ಸಂವಿಧಾನವನ್ನೇ ಬದಲಾಯಿಸಿದ್ದಾರೆಂದಲ್ಲ. ಅಷ್ಟಾಗಿಯೂ ಪೇಜಾವರ ಶ್ರೀಗಳ ಬೇಡಿಕೆಯಲ್ಲಿ ತಪ್ಪೇನಿದೆ? ವಕ್ಫ್ ಕಾಯ್ದೆ ತಿದ್ದುಪಡಿಗೆ ಬೆಂಬಲ ಎಂದಿದ್ದಾರೆ ಪ್ರಜಾಪ್ರಭುತ್ವದ ತಳಹದಿಯಲ್ಲಿ ರಚಿತವಾಗುವ ನೀತಿ ನಿಯಮಗಳಲ್ಲಿ ಸರ್ಕಾರ ಹಾಗು ಉಚ್ಚ ನ್ಯಾಯಾಲಯಕ್ಕೂ ಮೀರಿದ  ಮಂಡಳಿ ಇರಲು ಸಾಧ್ಯವೇ ? ಈ ಜಾಗ ನಮ್ಮದು ಎಂದು ನೋಟೀಸು ಕೊಡುವ ಸಂಸ್ಥೆ ಹಾಗು ಆ ನೋಟೀಸ್ ಅನ್ನು ಪ್ರಶ್ನೆ ಮಾಡಬೇಕೆಂದು ಉದ್ದೇಶಿಸಿದರೆ ನ್ಯಾಯಾಲಯಕ್ಕೂ ಹೋಗದೆ ಅದೇ ಸಂಸ್ಥೆ ಬಳಿಯೇ ನ್ಯಾಯ ಕೇಳಲು ಹೋಗಬೇಕೆಂದರೆ ಅದು ಎಷ್ಟು ಸರಿ?  ಪೇಜಾವರ ಶ್ರೀಗಳ ಕುರಿತು ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ ಕಳೆದ ಒಂದು ತಿಂಗಳ ಹಿಂದೆ  ಶ್ರೀಗಳು ಪೂಜಿಸುವ ಹರಿಯ ಹೆಸರಿಟ್ಟುಕೊಂಡ ಮಾಜಿ ಮಂತ್ರಿಯೊಬ್ಬರು ಶ್ರೀಗಳಿಗೆ ನೀವು ಕಾವಿ ಕಳಚಿ ರಾಜಕೀಯಕ್ಕೆ ಬನ್ನಿ ಎಂದಿದ್ದರು. ತನ್ನ ಜೀವನವನ್ನೇ ಹರಿ ಸೇವೆಗಾಗಿ ಮುಡಿಪಾಗಿಟ್ಟಿರುವ ಶ್ರೀಗಳಿಗೆ ಈ ಪಾಟಿ ಸವಾಲು ಹಾಕುವುದು ಎಷ್ಟು ಸರಿ. ಮಂತ್ರಿ ಮಾಗಧರು ಒಮ್ಮೆ ಖಾದಿ ತೆಗೆದು ಹೊರ ಬಂದು ಸಾಮಾನ್ಯ ಜನರ ಕಷ್ಟ ಕಾರ್ಪಣ್ಯದತ್ತ ಗಮನ ಕೊಡಲಿ. ಕಳಚಿ ಬರಬೇಕಾದ್ದು ಕೇವಲ ಖಾದಿ ಹಾಗು ಅದಕಂಟಿಕೊಂಡ ಅಧಿಕಾರ. ಹಣ, ಐಶ್ವರ್ಯ ಆಸ್ತಿ ಅಂತಸ್ತು ಎಲ್ಲವೂ ಹಾಗೆಯೇ ಇಟ್ಟುಕೊಳ್ಳಬಹುದು. ಆದರದು ಆಗದು ಅಲ್ಲವೇ ಅಂದ ಮೇಲೆ ಹರಿಯೇ ಸರ್ವಸ್ವ ಎಂದು ತಮ್ಮ ಜೀವನವನ್ನೇ ಹರಿ ಸೇವೆಗೆ, ಧರ್ಮ ಪ್ರಚಾರಕ್ಕೆ ಮುಡಿಪಾಗಿಟ್ಟ ಶ್ರೀಗಳಿಗೆ ಖಾವಿ ಕಳಚಿಟ್ಟು ರಾಜಕೀಯ ಮಾಡಿ ಎನ್ನುವುದು ಶೋಭೆ ತರುವ ಮಾತೆ ? ಒಂದು ಹಂತದಲ್ಲಿ ಮಹಾರಾಷ್ಟ್ರದಲ್ಲಿ ಸಾಧು ಸಂತರ ಬಗ್ಗೆ ಆಡಿದ ಇಂತಹ ಮಾತುಗಳೇ ಇಂದು ಕಾಂಗ್ರೆಸ್ ಹಾಗು ಮಿತ್ರ ಪಕ್ಷವನ್ನು ದಯನೀಯ ಸ್ಥಿತಿಗೆ ತಂದು ನಿಲ್ಲಿಸಿದೆ. ಇನ್ನಾದರೂ ಕಾಂಗ್ರೆಸ್ ಪಾಠ ಕಲಿಯಬೇಕು ಇಲ್ಲದಿದ್ದರೆ  ಮಹಾರಾಷ್ಟ್ರದಲ್ಲಾದ ಮತ ಪಂಥಗಳ ಧ್ರುವೀಕರಣ ಯಾವ ರಾಜ್ಯದಲ್ಲಾದರೂ ಆಗಬಹುದು.

ಕಾರ್ತಿಕ್ ಎಸ್ ಬಾಪಟ್

Tuesday, December 3, 2024

 ಭಿಡೆ ಗುರೂಜಿ ಎಂಬ ತರುಣರ ಸಂತ.

       ಮಹಾ ಚುನಾವಣೆಯ ಗಣಿತ ಬದಲಾಯಿಸಿದ ಭಿಡೆ ಗುರೂಜಿಯ ಅನುಯಾಯಿಗಳು.

ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಗೆದ್ದು ಇತಿಹಾಸ ನಿರ್ಮಿಸಿದೆ . ಇತ್ತ ಮಹಾ ಅಘಾಡಿಯ ಮಿತ್ರ ಪಕ್ಷಗಳು ಮತ್ತು ಇತರೆ ಸಣ್ಣ ಪುಟ್ಟ ಪಕ್ಷಗಳು ಸೋಲಿಗೆ  ಇ ವಿ ಎಂ ಕಾರಣ ಎಂದು ವಿನಾಕಾರಣ ದೂರುತ್ತಿವೆ. ಆದರೆ ಬಿ ಜೆ ಪಿ ಹಾಗು ಆರ್ ಎಸ್ ಎಸ್ ಈ ಗೆಲುವಿನ ರೂವಾರಿಗಳಾದ ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು, ಕೀರ್ತನಕಾರರು ಹಾಗು ಛತ್ರಪತಿ ಭಕ್ತ, ತರುಣರ ಸಂತ ಭಿಡೆ ಗುರೂಜಿ ಇವರಿಗೆ ಧನ್ಯತಾ ಭಾವದಿಂದ ಕೈ ಮುಗಿಯುತ್ತಿದೆ.  ಲೋಕಸಭಾ ಚುನಾವಣೆಯಲ್ಲಿ ಬಿ ಜೆ ಪಿ ನಿರ್ದಿಷ್ಟ ಸಂಖ್ಯೆಗಳನ್ನು ಪಡೆದು ಗುರಿ ತಲುಪಲು ಪಟ್ಟ ಪರಿ ಪಾಡು ನಾವೆಲ್ಲರೂ ನೋಡಿದ್ದೇವೆ. ಒಂದು ಹಂತದಲ್ಲಿ ನಡ್ಡಾಜಿ ಅತಿಯಾದ ಆತ್ಮವಿಶ್ವಾಸದಿಂದ ಈಗ ಆರ್ ಎಸ್ ಎಸ್ ಅವಶ್ಯಕತೆ ನಮಗಿಲ್ಲ ಎಂಬುವಂತೆ ಬಿಂಬಿಸುವ ಹೇಳಿಕೆಯನ್ನು ಕೊಟ್ಟು ಪೇಚಿಗೆ ಸಿಲುಕಿದ್ದು ನಂತರ ಬಿ ಜೆ ಪಿ ಯ ಗಳಿಕೆ ಇಳಿಕೆ ಆದದ್ದು ಎಲ್ಲವೂ ಜಗಜ್ಜಾಹಿರವಾದ ಸಂಗತಿ. ಅಂದರೆ ಆರ್ ಎಸ್ ಎಸ್ ಎಂಬ ಸಂಘಟನೆ ಚುನಾವಣಾ ಹೊಸ್ತಿಲಲ್ಲಿ  ಶಸ್ತ್ರ ತ್ಯಾಗ ಮಾಡಿದರೆ  ಏನಾದೀತು ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅದೇ ರೀತಿ ಇನ್ನೇನು ಬಿ ಜೆ ಪಿ ಯ ಸೋಲು ಸರ್ವ ಸಿದ್ಧ ಎಂದಾಗ ಆರ್ ಎಸ್ ಎಸ್ ರಂಗ ಪ್ರವೇಶಿಸಿದರೆ ಏನಾದೀತು ಎಂಬುದಕ್ಕೆ ಹರಿಯಾಣ ಹಾಗು ಮಹಾರಾಷ್ಟ್ರದ ಗೆಲುವು ತಾಜಾ ಉದಾಹರಣೆ. ಹರಿಯಾಣದಲ್ಲಂತೂ ಇನ್ನೇನು ಕಾಂಗ್ರೆಸ್ ಗೆದ್ದೇ ಬಿಟ್ಟಿತು ಎಂಬ ವಾತಾವರಣವಿದ್ದಾಗ ಕಾಂಗ್ರೆಸ್ ನಿಂದ ಗೆಲುವನ್ನು ಕಸಿದು ಕೊಂಡಿದ್ದು ಇದೇ ಆರ್ ಎಸ್ ಎಸ್ ನ ಚುನಾವಣಾ ನಿರ್ವಹಣೆ ಹಾಗು ನಡೆಸಿದ ಹದಿನಾರು ಸಾವಿರ ಸಣ್ಣ ಪುಟ್ಟ ಸಭೆಗಳು.ಇತ್ತೀಚಿಗೆ  ನಡೆದ ಮಹಾರಾಷ್ಟ್ರದ ಚುನಾವಣೆಯಲ್ಲಾದದ್ದು ಇದೇ. ಒಂದು ವರದಿಯ ಪ್ರಕಾರ ಆರ್ ಎಸ್ ಎಸ್ ಅರವತ್ತು ಸಾವಿರಕ್ಕೂ ಹೆಚ್ಚು ಸಣ್ಣ ಪುಟ್ಟ ಸಭೆಗಳನ್ನು ನಡೆಸಿತ್ತಂತೆ. ಅದಲ್ಲದೆ ಈ ಬಾರಿ ಬಿ ಜೆ ಪಿ ಯ ಕೈ ಹಿಡಿದದ್ದು ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು , ಕೀರ್ತನಕಾರರು ಹಾಗು ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರ ದಲ್ಲಿ ಬಿ ಜೆ ಪಿ ಯನ್ನು ಕೈ ಹಿಡಿದೆತ್ತಿದ್ದು ಒಂದು ಕಾಲದ   ಆರ್ ಎಸ್ ಎಸ್ ಸ್ವಯಂ ಸೇವಕರು ಹಾಗು ಇಂದು ಲಕ್ಷಾಂತರ ತರುಣರಿಗೆ ಛತ್ರಪತಿ  ಶಿವಾಜಿ ಮಹಾರಾಜರ  ವೀರಗಾಥೆಯನ್ನು ಭೋದಿಸಿ ತರುಣರಲ್ಲಿ ದೇಶ, ದೇವ ಹಾಗು ಧರ್ಮದೆಡೆ ಭಕ್ತಿಯ ಜ್ಯೋತಿ ಬೆಳಗಿಸುತ್ತಿರುವ ಬರಿಕಾಲ ಸಂತ "ಭಿಡೆ ಗುರೂಜಿ". ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕೈ ತಪ್ಪಬಹುದಾಗಿದ್ದ ಮರಾಠ ಮತಗಳು  ಭಿಡೆ ಗುರೂಜಿ ಅವರ ಪ್ರಭಾವದಿಂದ ಬಿ ಜೆ ಪಿ ತೆಕ್ಕೆಗೆ ಸೇರಿವೆ, ಹಾಗಾದರೆ ಯಾರಿವರು ಭಿಡೆ ಗುರೂಜಿ.

ತೊಂಬತ್ತರ ರ ಹೊಸ್ತಿಲಲ್ಲಿರುವ ಸಂಭಾಜಿರಾವ್ ವಿನಾಯಕ ರಾವ್ ಭಿಡೆ ಅವರನ್ನು  ಅವರ ಅನುಯಾಯಿಗಳು  ಭಕ್ತಿಯಿಂದ  ಭಿಡೆ ಗುರೂಜಿ ಎಂದು ಕರೆಯುತ್ತಾರೆ. ಭಿಡೆ ಗುರೂಜಿ "ಶಿವಪ್ರತಿಷ್ಠಾನ ಹಿಂದುಸ್ತಾನ"  ಎಂಬ ಸಂಘಟನೆಯ ಅಧ್ಯಕ್ಷರು. ಈ ಸಂಸ್ಥೆಯಡಿಯಲ್ಲಿ ಲಕ್ಷಾಂತರ ತರುಣರಿಗೆ ದೇಶದ ಬಗ್ಗೆ , ಶಿವಾಜಿ ಮಹಾರಾಜರ ಹಾಗು ಸಂಭಾಜಿ ಮಹಾರಾಜರ ಧ್ಯೇಯದ ಬಗ್ಗೆ , ತ್ಯಾಗದ ಬಗ್ಗೆ ತಿಳಿ ಹೇಳಿ ಒಂದಿಡೀ ದೇಶ ಭಕ್ತರ ಪಡೆಯನ್ನೇ ರಚಿಸಿದ್ದಾರೆ. ಇವರು ಕರೆ ಕೊಟ್ಟರೆ ಮುಗಿಯಿತು ಅದು ಎಷ್ಟೇ ಕಷ್ಟ ಸಾಧ್ಯದ ವಿಷಯವಾಗಿರಲಿ ತರುಣರ ಪಡೆ ಹಿಂದೆ ಸರಿಯುವುದಿಲ್ಲ ಅದನ್ನು ಸಾಧಿಸಿಯೇ ಸಿದ್ದ. ಅಂದರೆ ಭಿಡೆ ಗುರೂಜಿ ಯ ಮಾತು ತರುಣರಿಗೆ ವೇದ ವಾಕ್ಯ. ಅವರ ಜೀವನ ಶೈಲಿ ಕೂಡ ಅಷ್ಟೇ ಸರಳ ನೀವು ಕೊಲ್ಹಾಪುರದ ಕೆಂಪು ಬಸ್ಸನ್ನು ಹತ್ತಿ ಸಾಂಗ್ಲಿಗೆ ಪ್ರಯಾಣ ಬೆಳಿಸುತ್ತಿದರೆ ಅವರು ನಿಮ್ಮ ಪಕ್ಕಕ್ಕೆ ಬಂದು ಸಾಮಾನ್ಯ ನಾಗರಿಕರಂತೆ ಕುಳಿತರು ಕುಳಿತು ಕೊಂಡಿರಬಹುದು. ಶ್ವೇತ ವರ್ಣದ ಧೋತ್ರ ಮೇಲೊಂದು ಶ್ವೇತ ವರ್ಣದ ಅಂಗಿ ತಲೆಗೊಂದು ಬಿಳಿ ಟೊಪ್ಪಿ ಕೆಲವೊಮ್ಮೆ ಕೆಂಪು ಹಾಗು ಕೇಸರಿ ಪಗಡ. ಯಾವುದೇ ಕಾರಣಕ್ಕೂ ಪಾದ ರಕ್ಷೆಗಳನ್ನು ಧರಿಸುವುದಿಲ್ಲ, ಇಂದಿಗೂ ಬೆಳಗಾಗುವುದು ಸೂರ್ಯ ನಮಸ್ಕಾರ ಹಾಗು ಸಾವಿರ ದಂಡಗಳಿಂದ. ಅದು ಯಾವುದೇ ಪರಿಸ್ಥಿತಿ ಇರಲಿ ಕಾಡು ಮೇಡಿನ, ಕೋಟೆ ಕೊತ್ತಲೆಗಳ ದಾರಿ ಇರಲಿ ಕಾಲಿಗೆ ಪಾದ ರಕ್ಷೆಗಳನ್ನು ಮೆಟ್ಟಿದ್ದೆ ಇಲ್ಲ. ಇನ್ನು ಇರುವ ಆಸ್ತಿ ಎರಡು ಜೊತೆ ಬಟ್ಟೆಗಳು ಅಷ್ಟೇ. ಹೀಗೆ ಭಿಡೆ ಗುರೂಜಿ ಎಂದರೆ ನುಡಿದಂತೆ ನಡೆಯುವ ಬರಿಕಾಲಿನ ಸಂತ. ಇವರಿಗೆ ತಲೆದೂಗದ ರಾಜಕೀಯ ನಾಯಕರಿಲ್ಲ ಮೋದಿಜಿ , ಉದಯನರಾಜೆ ಭೋಸಲೆ (ಶಿವಾಜಿ ಮಹಾರಾಜರ ವಂಶಸ್ಥರು)   ಎನ್‌ಸಿಪಿ ನಾಯಕ ಆರ್‌ಆರ್ ಪಾಟೀಲ್, ಎಕೆನಾಥ್ ಶಿಂದೆ , ದೇವೇಂದ್ರ ಫಡ್ನವಿಸ್,  ಠಾಕ್ರೆ ಪರಿವಾರ ಎಲ್ಲರೂ ಇವರಿಗೆ ತಲೆಬಾಗುವವರೇ. ಹೀಗೆ ಭಿಡೆ ಗುರೂಜಿ ಅವರಿಗೆ ರಾಜಕಾರಣಿಗಳ ಒಡನಾಟವಿದ್ದರೂ ಕೂಡ ಇವರು ಸಕ್ರಿಯ ರಾಜಕಾರಣದಿಂದ ಗಾವುದ ಗಾವುದ ದೂರ. ಆದರೆ ದೇಶ ದೇವ ಹಾಗು ಧರ್ಮದ ವಿಷಯ ಬಂದಾಗ ಇಂತಹವರು ಎನ್ನದೆ ಯಾರನ್ನಾದರೂ ತರಾಟೆಗೆ ತೆಗೆದು ಕೊಳ್ಳುವ ಸ್ವಭಾವ. ಸೋಶಿಯಲ್ ಮೀಡಿಯಾ ಗಳು ದಾಂಗುಡಿ ಇಡುವ ಮುನ್ನವೇ ಭಿಡೆ ಗುರೂಜಿ ಬಸ್ಸಿನಲ್ಲಿ , ಕೆಲವೊಮ್ಮೆ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಶಿವಾಜಿ ಹಾಗು ಸಂಭಾಜಿ ಮಹಾರಾಜರ ಕನಸಿನ ಭಾರತವನ್ನು ಕಟ್ಟಲು ಹಳ್ಳಿಗಳಿಗೆ , ಪಟ್ಟಣಗಳಿಗೆ ಹಾಗು ನಗರಗಳಿಗೆ ಸಂಚರಿಸಿ ತರುಣರ ಬ್ರಹತ್ ಪಡೆಯನ್ನೇ ಸೃಷ್ಟಿಸಿದ್ದರು. ಆದರೆ ಆ ತರುಣ ಪಡೆಯನ್ನು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಆಗಲಿ ಅಥವಾ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡವರಲ್ಲ.ಕೆಲ ರಾಜಕೀಯ ವ್ಯಕ್ತಿಗಳು ಸೆಕ್ಯುಲರ್ ಮುಖವಾಡದಡಿ ಇವರ ಮೇಲೆ ಕೆಲವೊಮ್ಮೆ ಹಲ್ಲೆಗೂ ಮುಂದಾಗಿದ್ದರು ಎಂಬುದು ವಿಪರ್ಯಾಸ . ಆದರೆ ಭಿಡೆ ಗುರೂಜಿ ಮಾತ್ರ ತಮ್ಮ ತರುಣ ವರ್ಗಕ್ಕೆ ಭೋದಿಸುತ್ತಿರುವುದು  ದೇವ , ದೇಶ, ಧರ್ಮಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಜೀವನ ಶೈಲಿಯಲ್ಲಿ ಇಂತಹವುದು ಸಹಜ ಇಂತಹವರನ್ನು ನಿರ್ಲಕ್ಷಿಸಿರಿ ಎಂದು. ಅಲ್ಲದೆ ಗುರೂಜಿ ಬ್ರಹತ್ ಸಂಕಲ್ಪವನ್ನು ಮಾಡಿದ್ದಾರೆ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಂದಾಜು 1280 ಕೆಜಿ ಚಿನ್ನದ ಸಿಂಹಾಸನವನ್ನು ಅವರ ಪಟ್ಟಾಭಿಷೇಕವಾದ ಜಾಗ ರಾಯಘಡದಲ್ಲಿಯೇ ಮರು ಪ್ರತಿಷ್ಠಾಪಿಸುವ ಪಣ ತೊಟ್ಟಿದ್ದಾರೆ, ಈ ಮಹತ್ ಕಾರ್ಯಕ್ಕೆ ಹಣ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ರಾಜಕೀಯ ನಾಯಕರನ್ನು ಸಂಪೂರ್ಣವಾಗಿ ದೂರವಿಟ್ಟಿರುವುದು ಮತ್ತೊಂದು ವಿಶೇಷ.

ಹೀಗೆ ಭಿಡೆ ಗುರೂಜಿ  ಅವರ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ತರುಣರಲ್ಲಿ ಶಿವ ಭಕ್ತಿ, ದೇಶ ಭಕ್ತಿ ಹಾಗು ಧರ್ಮ ಭಕ್ತಿಯ ಬೀಜ ಬಿತ್ತುತಿದೆ, ಪರಿಣಾಮವಾಗಿ ಅಸಂಖ್ಯತ ತರುಣರು ಶಿವಾಜಿ ಹಾಗು ಸಂಭಾಜಿ ಮಹಾರಾಜರು ನಡೆದ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ತೊಟ್ಟಿದ್ದಾರೆ. ಹಿಂದೂ ರಾಷ್ಟ್ರ ದೇವೋ ಭವ ಎಂಬ ವಿಶೇಷವಾದ ವೃತದ ದೀಕ್ಷೆ ತೊಟ್ಟಿದ್ದಾರೆ. ವೃತದಿಂದ ವೃತ್ತಿ ಹಾಗು ವೃತ್ತಿಯಿಂದ ರಾಷ್ಟ್ರಹಿತಕ್ಕಾಗುವ ಕೃತಿ ಸೃಷ್ಟಿಸಲು ಸಾಧ್ಯ ಎಂಬ ನಂಬಿಕೆ ಭಿಡೆ ಗುರೂಜಿ ಅವರದು. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಶಿವ ಪ್ರತಿಷ್ಠಾನ ಹಮ್ಮಿಕೊಂಡಿದೆ. ಅವುಗಳಲ್ಲಿ ದುರ್ಗಾ ಮಾತಾ ದೌಡ, ಬಲಿದಾನ್ ಮಾಸ್ ಹಾಗು ಗಡ್ಕೋಟ್ ಮೋಹಿಮ್ ಅಂತಹ ಕಾರ್ಯಕ್ರಮಗಳು ವಿಶೇಷವಾದುದು.

ಪ್ರತಿ ನವರಾತ್ರಿಯಂದು, ಮಹಾರಾಷ್ಟ್ರದಾದ್ಯಂತ ಶಿವಪ್ರತಿಷ್ಠಾನದ ಸದಸ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ  ಸೇರಿ  ದೇವಸ್ಥಾನದ ಕಡೆಗೆ ದುರ್ಗೆಯನ್ನು ಭಜಿಸುತ್ತ ಓಡುವ ವಿಶಿಷ್ಟ ಪರಂಪರೆ ಹುಟ್ಟು ಹಾಕಿ ಈ ಉತ್ಸವಕ್ಕೆ ದುರ್ಗಾ ಮಾತಾ ದೌಡ್ ಎಂದು ನಾಮಕರಣ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಏನು ವಿಶೇಷ ಅನ್ನುತ್ತಿದಿರಿ ಆದರೆ ಶಿವ ಪ್ರತಿಷ್ಠಾನದ ತರುಣರು ಅಂದು  ದೇಶದ ಹಿತಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ, ತರುಣರ ಉಪವಾಸ  ವೈಯಕ್ತಿಕ ಬೇಡಿಕೆಗಳಿಗಲ್ಲ.ಅವರ ಪ್ರಾರ್ಥನೆ ದೇಶಕ್ಕಾಗಿ,  ಆದ್ದರಿಂದ ದುರ್ಗಾ ಮಾತಾ ದೌಡ್ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ   "ರಾಷ್ಟ್ರೀಯ ನವರಾತ್ರಿ" ಎಂಬಂತೆ ಆಚರಿಸಲ್ಪಡುತ್ತಿದೆ.  ಅದೇ ರೀತಿ ಛತ್ರಪತಿ ಸಂಭಾಜಿ ಮಹಾರಾಜ್ ತನ್ನ ಜೀವವನ್ನು ದೇಶಕ್ಕಾಗಿ ತ್ಯಾಗ ಮಾಡಿದ ದಿನವನ್ನು ಗುರೂಜಿ ಅನುಯಾಯಿಗಳು ಬಲಿದಾನ ದಿವಸ್ ಎಂದು  ಆಚರಿಸುತ್ತಾರೆ. ಸಂಭಾಜಿ ಮಹಾರಾಜ್ ರನ್ನು ದುರಳ ಔರಂಗಜೇಬ ಸರಿ ಸುಮಾರು ಒಂದು ತಿಂಗಳು ಬಂಧನದಲ್ಲಿಟ್ಟು ಕಿರುಕುಳ ಕೊಟ್ಟಿದ್ದನು. ಈ ನಿಟ್ಟಿನಲ್ಲಿ  ಸಂಭಾಜಿ ಮಹಾರಾಜರಿಗೆ ಗೌರವ ಸಲ್ಲಿಸಲು ಫಾಲ್ಗುಣದ ಮೊದಲ ದಿನದಿಂದ ಫಾಲ್ಗುಣ ಅಮವಾಸ್ಯೆಯವರೆಗೆ ದಿನಂ ಪ್ರತಿ ತರುಣರೆಲ್ಲರೂ ಸೇರಿ ಭಿಡೆ ಗುರೂಜಿ ಅವರೇ ರಚಿಸಿದ ಸ್ವರಾಜ್ಯ ಶ್ಲೋಕಗಳನ್ನು ಪಠಿಸಿ ಆ ಮೂವತ್ತು ದಿನಗಳ ಕಾಲ ಸ್ವರಾಜ್ಯಕ್ಕಾಗಿ ಸಿಹಿತಿಂಡಿಗಳು ಮತ್ತು ಮನರಂಜನೆಯನ್ನು ತ್ಯಜಿಸಿ ಉಪವಾಸವನ್ನು ಕೈಗೊಳ್ಳುತ್ತಾರೆ.

ಇನ್ನು "ಗಡ್ಕೋಟ್ ಮೋಹಿಮ್" ಇದು ಶಿವಪ್ರತಿಷ್ಠಾನ ಆಯೋಜಿಸುವ ಮತ್ತೊಂದು ವಿಶಿಷ್ಟ ಕಾರ್ಯಕ್ರಮ. ಶಿವಾಜಿ ಮಹಾರಾಜರ ನೆನಪಿನಲ್ಲಿ ಶಿವಾಜಿಯ ದೇಶ ಪ್ರೇಮದ ಪ್ರತೀಕವಾಗಿ ಸಾವಿರಾರು ಯುವಕರು ಪ್ರತಿಕೂಲ ವಾತಾವರಣದಲ್ಲಿ ಕಾಡು ಮೇಡಿನ ಕೋಟೆ ಕೊತ್ತಲೆಗಳ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ,  ಪ್ರಯಾಣಿಸುತ್ತಿರುವ ಸ್ಥಳದ ಐತಿಹಾಸಿಕ  ಮಹತ್ವವನ್ನು ಇತಿಹಾಸಕಾರ ಮೂಲಕ ಪರಿಚಯಿಸುವ ಕೆಲಸವನ್ನು ಭಿಡೆ ಗುರೂಜಿ ತನ್ಮಯತೆಯಿಂದ ನಡೆಸಿಕೊಡುತ್ತಾರೆ. ಆಶ್ಚರ್ಯದ  ವಿಷಯವೆಂದರೆ  ಗುರೂಜಿ ಅವರು  ವೃದ್ಧಾಪ್ಯದ ಹೊರತಾಗಿಯೂ ಪ್ರಾರಂಭದಿಂದ ಕೊನೆಯವರೆಗೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ತರುಣ ಸಾಗರದೊಂದಿಗೆ ನಾಲ್ಕರಿಂದ ಐದು ದಿನಗಳ ಕಾಲ ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಭಿಡೆ ಗುರೂಜಿ  ದೇಶಕ್ಕಾಗಿ , ಶಿವಾಜಿಯ ಧ್ಯೇಯಕ್ಕಾಗಿ  ಚಂದನದ ಕೊರಡಿನಂತೆ ತಮ್ಮ ಜೀವನವನ್ನೇ ತೇಯುತ್ತಿದ್ದಾರೆ.  ಇಂತಹ ಗುರೂಜಿ ಅವರ ಬಗ್ಗೆ ಮಹಾ ಅಘಾಡಿಯ ಮಿತ್ರ ಪಕ್ಷಗಳ ಹೇಳಿಕೆಗಳು ಹಾಗು ಪವಾರ್ ಅವರ ಕೃಪಾ ಪೋಷಿತ ಬ್ರಿಗೇಡ್ ಅಡಿಯಲ್ಲಿ ಸ್ವಾಮಿ ಸಮರ್ಥರ ಬಗ್ಗೆ ಆಡಿದ ಉಘಡ ಬಾಬಾ ಅಂದರೆ ಬರಿ ಮೈಯಲ್ಲಿ ಅಡ್ಡಾಡುವವರನ್ನು ಹೇಗೆ ನಮಿಸುವುದು ಎಂಬಂತ ಅರ್ಥ ಬರುವಂತಹ  ಹೇಳಿಕೆಗಳು ಭಕ್ತರನ್ನು ರೊಚ್ಚಿಗೆಬ್ಬಿಸಿತು. ಈ ಕೃತ್ಯವನ್ನು ಕಾಳ್ಗಿಚ್ಚಿನಂತೆ ಮನೆ ಮನೆಗೆ ತಲುಪಿಸಿ “ಏಕ್ ಹೈ ತೊ ಸೇಫ್ ಹೈ” ಎಂಬ ಅಭಂಗ ಹಾಡಿದ್ದುವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು ಹಾಗು ಕೀರ್ತನಕಾರರು. ಹೀಗಾಗಿ ಜಾತಿಯ ಸಂಕೋಲೆಯಲ್ಲಿ  ಛಿದ್ರವಾಗಲಿದ್ದ ಮರಾಠ ಮತಗಳು ಒಟ್ಟಾಗಿ ಸೇರಿ ಅಘಾಡಿಯ ಲಗಾಡಿ ತೆಗೆದಿದೆ.

ಕಾರ್ತಿಕ್ ಎಸ್ ಬಾಪಟ್

Monday, October 21, 2024

 ಮಿಥುನ್ ಪಯಣದ ಹಾದಿ ಪ್ರೇರಣಾದಾಯಕ 

ಅಸಫಲತೆ, ಸಂಘರ್ಷ,ಅವಾಮನ ಹಾಗು ಸೋಲು ಹೀಗೆ ಬದುಕಿನಲ್ಲಿ ಸಾಲು ಸಾಲು ಸೋಲುಗಳನ್ನು ಸವಾಲುಗಳನ್ನು ಎದುರಿಸುವ ಯುವ ಮನಸ್ಸುಗಳು ಕೆಲವೊಮ್ಮೆ ಬದುಕೆಂಬ ಬದುಕಿಗೆ ಕೊಳ್ಳಿ ಇಟ್ಟು ಜೀವ ಹಾಗು ಜೀವನವನ್ನು ಕೈ ಚೆಲ್ಲಿದ ಹಲವಾರು ಉದಾಹರಣೆಗಳಿವೆ. ಅಂತವರೆಲ್ಲರೂ ಒಮ್ಮೆ ಮಿಥುನ್ ಬಣ್ಣದ ಬದುಕಿನ ಪಯಣದ ಹಾದಿಯನ್ನು ಗಮನಿಸಬೇಕು. ಮಿಥುನ್ ಪಯಣಿಸಿದ ಹಾದಿ ನಿಜಕ್ಕೂ ಒಂದು ಪ್ರೇರಣಾ ದಾಯಕ ಸಂಗತಿ. ಮಿಥುನ್ ಅವರಿಗೆ ಚಿತ್ರ ಜಗತ್ತಿನ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅರಸಿ ಬಂದಿದೆ. ರಾಜಕಪೂರ್ ನಂತರ  ಇಂಟರ್ನ್ಯಾಷನಲ್ ಫೇಮ್ ಪಡೆದವರ   ಸಾಲಿನಲ್ಲ ಮಿಥುನ್ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಮಿಥುನ್ ಆಮ್ ಡಿಸ್ಕೋ ಡ್ಯಾನ್ಸರ್ ಎಂದೋ  ಜಿಮ್ಮಿ ಜಿಮ್ಮಿ ಎಂದೋ ಒಂದಿಡೀ ಯುರೋಪ್, ಅಂದಿನ ಸೋವಿಯತ್ ಯೂನಿಯನ್ , ಜಪಾನ್ ಹಾಗು ಭರತ ಖಂಡವನ್ನು ತನ್ನ ತಾಳಕ್ಕೆ ಕುಣಿಸಿದ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದು. ಹೀಗೆ ಪ್ರಪಂಚದ ನಾನಾ ಪ್ರಾಂತ್ಯಗಳಲ್ಲಿ ತನ್ನ ನೃತ್ಯ ಕೌಶಲ್ಯದಿಂದ ಹುಚ್ಚೆದ್ದು ಕುಣಿಸುವಂತೆ ಮಾಡಿದ್ದ ಮಿಥುನರನ್ನು ಬದುಕು ಪ್ರಾರಂಭದಲ್ಲಿ ಇನಿಲ್ಲದಂತೆ ನಾನಾ ಸವಾಲುಗಳ ತಾಳಕ್ಕೆ ಕುಣಿಸಿತ್ತು ಎಂಬುದು ಕೂಡ ಅಷ್ಟೇ ಸತ್ಯ.ಕಾಲೇಜು ದಿನಗಳಲ್ಲಿ ಒಂದು ಬಗೆಯ ಕ್ರಾಂತಿಕಾರಿ ಚಿಂತನೆಗಳಿಂದ ಪ್ರೇರಿತರಾಗಿದ್ದ ಮಿಥುನ್ ಕಾಲ ಕಳೆದಂತೆ ನಕ್ಸಲ್ ಚಿಂತನೆಗಳತ್ತ ಹೊರಳಿದ್ದರು. ಮಿಥುನ್ ಅಂದಿನ  ಕಮ್ಯುನಿಸ್ಟ್ ಹಾಗು ನಕ್ಸಲ್ ನಾಯಕ ಚಾರು ಮಝುಂದಾರ್ ರೊಂದಿಗೆ  ಪ್ರಭಲವಾದ ನಂಟನ್ನು ಹೊಂದಿದ್ದರು ಪರಿಣಾಮವಾಗಿ ನಕ್ಸಲ್ ಚಟುವಟಿಕೆಗಳಲ್ಲಿಯೂ ಭಾಗಿಯಾಗುವ  ಪ್ರಮೇಯಗಳು ಬಂದೊದಗಿದ್ದವು. ಆದರೆ ಪೋಷಕರಿಗೆ ಅದರಲ್ಲಿಯೂ ಅವರ ತಾಯಿಗಂತೂ ಮಿಥುನ್ ಹೊತ್ತು ಗೊತ್ತಿಲ್ಲದೇ ಕಾಣೆಯಾಗುತ್ತಿದ್ದದು ಹೊತ್ತಲ್ಲದ ಹೊತ್ತಿನಲ್ಲಿ ಮನೆ ಸೇರುತ್ತಿದ್ದದ್ದು ಮಿಥುನ್ ಬದುಕಿನ ಬಗ್ಗೆ ಚಿಂತೆಯನ್ನುಂಟು ಮಾಡಿತ್ತು. ಯಾವುದೇ ಕ್ಷಣದಲ್ಲೂ ಪೋಲೀಸರ ಬಂದೂಕಿನ ನಳಿಕೆಯ ಗುಂಡು ಮಿಥುನ್ ಎದೆ ಸೀಳುವ ಸಂಭವವಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಮಿಥುನ್ ಸಹೋದರನ ಸಾವು ಹಾಗು ತಾಯಿಯ ಮಮತೆ ಮಿಥುನ್ ನಕ್ಸಲ್ ವಾದವನ್ನು ಬಿಟ್ಟು ಕೋಲ್ಕತ್ತಾ ನಗರವನ್ನು ತೊರೆಯುವಂತೆ ಮಾಡಿತ್ತು. ಅಂದಿನ ಒಂದು ನಿರ್ಣಯ ಮಿಥುನರನ್ನು ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯವರೆಗೆ ತಂದು ನಿಲ್ಲಿಸಿದೆ.

ನಕ್ಸಲ್ ಚಿಂತನೆ ಹಾಗು ಕೋಲ್ಕತ್ತಾದ ಮಧ್ಯಮವರ್ಗದ ಬದುಕಿನ ಸವಾಲುಗಳು ಒಂದು ಬಗೆಯದಾಗಿದ್ದರೆ  ಮುಂಬೈ ಬದುಕಿನ ಸವಾಲುಗಳೇ ಬೇರೆಯದಾಗಿದ್ದವು ಅಲ್ಲಿ ಇರಲು ಸೂರಿನಿಂದಾದಿಯಾಗಿ ಮಹಾನಗರಿಯ ಒಂಟಿತನದವರೆಗೆ ಬದುಕಿನ ನಾನಾ ಮಜುಲುಗಳು ದರ್ಶನವಾಗುತಿತ್ತು. ಮೊದ ಮೊದಲು ತನ್ನ ನೆಂಟರಿಷ್ಟರ  ಮನೆಯಲ್ಲುಳಿದು ಮುಂಬೈ ಬದುಕಿಗೆ ಆಗ ತಾನೇ ಕಣ್ ತೆರೆಯುತಿದ್ದ ಮಿಥುನ್ ಗೆ ಇನ್ನಿಲದಂತೆ ಕಾಡಿದ್ದು ನಕ್ಸಲ್ ಛಾಯೆಯ ದಿನಗಳು. ನೆಂಟರಿಷ್ಟರು ಹಿಂದಿದ್ದ ನಕ್ಸಲ್ ನಂಟನ್ನು  ಪ್ರಸ್ತಾಪಿಸಿ ಮನೆಗಳಿಂದ ಹೊರದಬ್ಬಿದ್ದರು. ಆದರೆ ಛಲ ಬಿಡದ ಛಲದಂಕ ಮಲ್ಲನಂತೆ ಮಿಥುನ್ ಮುಂಬೈ ಬೇಡಿದ ಎಲ್ಲ ಸುಂಕವನ್ನು ಕಾಲದಿಂದ ಕಾಲಕ್ಕೆ ಕಟ್ಟುತ್ತಾ ನಟನಾಗುವ ಸಂಕಲ್ಪವನ್ನು ಮತ್ತಷ್ಟು ಗಟ್ಟಿಕೊಳಿಸಿಕೊಂಡಿದ್ದರು. ಹಾದಿಯಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಮುಂಬೈ ನಲ್ಲಿ ಹಾಗು ಹೀಗೂ ರಸ್ತೆಗಳಲ್ಲಿ , ಪುಟ್ ಪಾಥಗಳಲ್ಲಿ ಜೀವನ ಕಳೆದು  ಅಲ್ಲಿಯೇ ಕೆಲವು ಸ್ನೇಹಿತರನ್ನು ಸಂಪಾದಿಸಿ  ಮುಂಬೈನ  ಒಂಟಿತನಕ್ಕೆ ಸಡ್ಡು ಹೊಡೆದಿದ್ದರು. ರಾತ್ರಿ 12 ಗಂಟೆಗಳ ವರೆಗೆ ರಸ್ತೆಯಲ್ಲಿ ಅಡ್ಡಾಡಿಕೊಂಡು ಕಾಲ ಕಳೆದು ನಂತರ ಸ್ನೇಹಿತರ ಹಾಸ್ಟೆಲ್ಗಳಲ್ಲಿ ವಾಸವಿದ್ದು ಬೆಳ್ಳಂ ಬೆಳಗ್ಗೆ ನಾಲ್ಕರ ಆಸು ಪಾಸಿನಲ್ಲಿ ಹಾಸ್ಟೆಲ್ನಿಂದ ಹೊರಗೆ ಬಂದು ಹಾಸ್ಟೆಲ್ ಎದುರೇ ಇದ್ದ ಸುಲಭ ಶೌಚಾಲಯಗಳಲ್ಲಿ, ಜಿಂಖಾನದಲ್ಲಿ ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ ಪುಟ್ ಪಾತಗಳಲ್ಲಿ, ಲೋಕಲ್ ರೈಲುಗಳಲ್ಲಿ, ಜುಹೂ ಕಿನಾರೆಯಲ್ಲಿ ಪೆನ್ನು , ಕಾಸೆಮಿಟಿಕ್ಸ್ ಗಳನ್ನೂ ಮಾರಿ ಜೀವನ ಸಾಗಿಸುತ್ತಿದ್ದರು. ಹಾಗಿದ್ದಾಗ್ಯೂ ಗಮ್ಯದೆಡೆಗಿದ್ದ ಲಕ್ಷ್ಯ ಮಾತ್ರ ಬದಲಾಗಿರಲಿಲ್ಲ.   ಅದೇ ಸಮಯದಲ್ಲಿ ಪುಣೆಯ ಎಫ್ ಟಿ ಟಿ (FTTI ) ಫಿಲಂ ಅಂಡ್ ಟೆಲಿವಿಷಿನ್ ಇನ್ಸ್ಟಿಟ್ಯೂಟ್ ಓಫ್ ಇಂಡಿಯಾ ದಲ್ಲಿ ಸೇರಬೇಕೆಂದು ತನ್ನ ಸ್ನೇಹಿತನ ಸಹಾಯದಿಂದ ಅರ್ಜಿ ಸಲ್ಲಿಸಿ ಮನೆಯವರ ಇಚ್ಛೆಯ ವಿರುದ್ಧ ಎಫ್ ಟಿ ಟಿ ನಲ್ಲಿ ಸಂದರ್ಶನ ಕೊಟ್ಟು ಸೀಟು ಗಿಟ್ಟಿಸಿಕೊಂಡಿದ್ದರು. ಆದರೆ ಅಂದು ಎಫ್ ಟಿ ಟಿ ನಲ್ಲಿದವರೆಲ್ಲರೂ ದೊಡ್ಡ ದೊಡ್ಡ ಸ್ಥಾನಗಳಲಿದ್ದವರ ಮಕ್ಕಳು , ದೊಡ್ಡ ದೊಡ್ಡ ನಗರಗಳ ವಿದ್ಯಾರ್ಥಿಗಳು ಅವರೊಡನೆ ಒಡನಾಡುವಾಗ ಮಿಥುನ್ ಕೆಲವೊಮ್ಮೆ ಕುಗ್ಗಿ ಹೋಗುತ್ತಿದ್ದರಂತೆ, ಅದೇ ಕಾರಣಕ್ಕೆ ಹೊಸ ಬಟ್ಟೆಗಳನ್ನು ಹೋಲಿಸಿ ಫೈವ್ ಸ್ಟಾರ್ ಹೋಟೆಲ್ನಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬಂದಿದ್ದರಂತೆ ಅಂದರೆ ಮಿಥುನ್ ತನ್ನ  ಗುರಿ ಮುಟ್ಟಲು ಏನೇನು ಬೇಕೋ ಅದೆಲ್ಲವನ್ನು ಎಷ್ಟೇ ಕಷ್ಟ ಬಂದರು ಮಾಡಿಯೇ ಸಿದ್ದ ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಎಫ್ ಟಿ ಟಿ ನಲ್ಲಿದ್ದ ಬಂಗಾಳಿ ವಿದ್ಯಾರ್ಥಿಗಳನ್ನು ಕಡೆಗಣಿಸಿ ್ಯಾಗಿಂಗ್ ನಂತಹ ಪ್ರಸಂಗಗಳು ನಡೆದಾಗ ಮಿಥುನರಲ್ಲಿ ಬಂಗಾಳಿ ಅಸ್ಮಿತೆ ಜಾಗ್ರತರಾಗಿ ಸಿಡಿದೇಳುತ್ತಿದ್ದರಂತೆ. ಹೀಗೆ ಎಫ್ ಟಿ ಟಿ ನಟನೆಯ ಪಾಠವನ್ನೇನೋ ಕಲಿಸಿತು ಎಫ್ ಟಿ ಟಿ ನಲ್ಲಿ ಕಲಿತವರೆಲ್ಲರೂ ನಟರಾಗಿ ಯೆಶಸ್ವಿಯಾಗಬೇಕೆಂದಿಲ್ಲವಲ್ಲ.

ಎಫ್ ಟಿ ಟಿ ನಂತರದ ದಿನಗಳು  ಅಷ್ಟೇ ಪ್ರಯಾಸದಾಯಕವಾಗಿದ್ದವು ಆದರೆ ಮಿಥುನ್ ರಲ್ಲಿ ಗಮ್ಯದೆಡೆಗಿದ್ದ ಏಕಾಗ್ರತೆ ಬದಲಾಗಿರಲಿಲ್ಲ. ನಾನಾ ಈವೆಂಟ್ಗಳಲ್ಲಿ ಸಿನಿಮಾ ಜಗತ್ತಿನ ಮಂದಿ ಗುರುತಿಸಲಿ ಎಂದೇ ಯಾವ ಅಪೇಕ್ಷೆ ಇಲ್ಲದೆ ಡಾನ್ಸ್ ಮಾಡಿ ಬರುತ್ತಿದ್ದರಂತೆ. ಹಾಗಿರುವಾಗ ಖ್ಯಾತ ತಾರೆ ಹೆಲೆನ್ ಅವರ ಇವೆಂಟ್ ಶುರವಾಗುವ ಮುನ್ನ ಮಿಥುನ್ ಮೂವತ್ತು ನಿಮಿಷಗಳ ಕಾಲ ಭರ್ಜರಿ ಡಾನ್ಸ್ ಪ್ರದರ್ಶನ ಮಾಡಿದ್ದರಂತೆ, ಪರಿಣಾಮ ಸಿನಿಮಾ ಸುದ್ದಿಯನ್ನು ಹಿಡಿದಿಡುವ ಪತ್ರಕರ್ತ ಮಿತ್ರರು ಮಿಥುನ್  ಅವರ ನೃತ್ಯ ಹೆಲೆನ್ ಅವರನ್ನು ಮೀರಿಸುವಂತಿತ್ತು ಎಂದು ಬರೆದಿದ್ದರಂತೆ ಇದು  ಡಿಸ್ಕೋ ಡ್ಯಾನ್ಸರ್ ಖ್ಯಾತಿಯ ನಿರ್ದೇಶಕ ಸುಭಾಷ ಅವರ ಗಮನ ಸೆಳಿದಿತ್ತು. ಆದರೆ ಸುಭಾಷ ತತಕ್ಷಣಕ್ಕೇನು ಅವಕಾಶ ಕೊಟ್ಟಿರಲಿಲ್ಲ. ಮಿಥುನ್ ಮೃಣಾಲ್ ಸೇನ್ ಅವರ ಮೃಗಯ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು ತನ್ನ ಮೊತ್ತ ಮೊದಲ ಚಲನ ಚಿತ್ರದಲ್ಲಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದರುಅಂದು ಮಿಥುನರನ್ನು ಉದ್ದೇಶಿಸಿ ನಿಮಗೆ ರಾಷ್ಟೀಯ ಪುರಸ್ಕಾರ ದೊರೆತಿದೆ ಎಂದು ಹೇಳಿದಾಗ ಮಿಥುನ್ ಪುರಸ್ಕಾರಕ್ಕೆ ಎಷ್ಟು ಸಂಭಾವನೆ ದೊರೆಯಬಹುದು ಎಂದು ಕೇಳಿದ್ದರಂತೆ , ಸಂಭಾವನೆಯೇನಿಲ್ಲ ಎಂದಾಗ  ರಾಷ್ಟೀಯ ಪುರಸ್ಕಾರ ಪಡೆದ ಸಂತೋಷ ಕ್ಷಣ ಮಾತ್ರದಲ್ಲಿ ಮಾಯವಾಗಿತ್ತು. ಪುರಸ್ಕಾರಗಳು ಹಸಿವನ್ನು ನೀಗಿಸುವುದಿಲ್ಲವಲ್ಲ. ಕಾಲ ಕಳೆದಂತೆ ಮಿಥುನ್ ಸಣ್ಣ ಪುಟ್ಟ ಪಾತ್ರದಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮಿಥುನ್ ಅದೃಷ್ಟದ ಬಾಗಿಲು ತೆರೆದಿದ್ದು "ಡಿಸ್ಕೋ ಡ್ಯಾನ್ಸರ್" ಚಿತ್ರದ ಅವಕಾಶ. ಅಂದು ಹೆಲೆನ್ ಅವರ ಈವೆಂಟ್ನಲ್ಲಿ ಮಿಥುನ್ ಬಗ್ಗೆ ಬರೆದಿದ್ದ ಬರವಣಿಗೆಯಿಂದ ಪ್ರಭಾವಿತರಾಗಿದ್ದ ಸುಭಾಷ ಮಿಥುನ್ ರನ್ನು ಕರೆದು ಯು ವಿಲ್ ಬಿ ದಿ  ಡ್ಯಾನ್ಸಿಂಗ್ ಸ್ಟಾರ್ ಓಫ್ ಅವರ್ ನೇಶನ್ ಆಫ್ಟರ್  ದಿಸ್ ಮೂವಿ ಅಂದಿದ್ದರಂತೆ ಅದೇ ಕೊನೆ ಮಿಥುನ್ ಹಿಂದಿರುಗಿ ನೋಡಲಿಲ್ಲ. ತನ್ನ ಬಣ್ಣದ ಬಗ್ಗೆ, ಮಾತನಾಡುವ ಶೈಲಿಯ ಬಗ್ಗೆ ಟೀಕಿಸಿದ್ದ ಹಲವರಿಗೆ ಡಿಸ್ಕೋ ಡ್ಯಾನ್ಸರ್ ಮೂಲಕ ಉತ್ತರ ನೀಡಿದ್ದರು. ನಂತರ ನಡೆದಿದ್ದು ಇತಿಹಾಸ ಒಟ್ಟಿನಲ್ಲಿ ಘಟಾನುಘಟಿ ನಾಯಕರಾದ ಅಮಿತಾಭ್ , ವಿನೋದ್ ಖನ್ನಾ , ಧರ್ಮೇಂದರ್ ಇವರೆಲ್ಲರ ನಡುವೆ ಮಿಥುನ್  ತನಗೊಂದು ವಿಶಿಷ್ಟ ಸ್ಥಾನ ಸೃಷ್ಟಿಸಿಕೊಂಡಿದ್ದರು. ಅಂದು   ಸಾವಲ ರಂಗಕ ಲಡಕಾ  ಕ್ಯಾ ಕರೇಗಾ (ಗೋಧಿ ಬಣ್ಣದ ಹುಡುಗ ಏನು ಮಾಡಿಯಾನು) ಎಂದು ಮೂಗು ಮುರಿದಿದ್ದ ನಿರ್ದೇಶಕರು ಮಿಥುನ್ ಕಾಲ್ ಶೀಟಿಗೆ ದುಂಬಾಲು ಬಿದ್ದಿದ್ದರು.

ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಮುಡಿಗೇರಿದೆ, ಆದರೆ ಕೆಲವರು ಇದರಲ್ಲೂ ರಾಜಕೀಯದ ವಾಸನೆ ಇದೆ ಎಂದು ಗುಲ್ಲೆಬಿಸುತ್ತಿದ್ದಾರೆ, ಒಂದು ವೇಳೆ ಹಾಗಾಗಿದ್ದರು ಮಿಥುನ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅರ್ಹರೆಂಬುದರಲ್ಲಿ ಎರಡು ಮಾತಿಲ್ಲ. ಕೆಲವರು ಧರ್ಮೇಂದರ ಅವರಿಗೆ ಪ್ರಶಸ್ತಿ ಸಿಗಬೇಕಿತ್ತು ಎನ್ನುತ್ತಾರೆ ಆದರೆ ಪ್ರಶಸ್ತಿ ಕೊಡುವಾಗ ಕೆಲವು ನಿರ್ದಿಷ್ಟ ಮಾನದಂಡಗಳಿರುತ್ತವೆ  ಅದು ಕೆಲವೊಮ್ಮೆ ಜನಪ್ರಿಯತೆಯನ್ನು ಮೀರಿ ಕೆಲವು ಅಂಶಗಳನ್ನು ಗಣನೆಗೆ ಪಡೆದುಕೊಳ್ಳುತ್ತದೆ ಅಲ್ಲಿ ಕೆಲವರು ಜನಪ್ರಿಯತೆಯ ಎಲ್ಲೇ ಮೀರಿ ಮುಂದಿರುತ್ತಾರೆ. ಮುಂದೊಂದು ದಿನ ಧರ್ಮೇಂದರ್ ಕೂಡ ಪ್ರಶಸ್ತಿಗೆ ಭಾಜನರಾಗಬಹುದು. ಅಂದ ಹಾಗೆ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಕೂಡ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ವಂಚಿತರಾದವರೆಂದು ಮರೆಯಬಾರದು. ಅದೇನೇ ಇರಲಿ ಮಿಥುನ್ ದಾ ಹೇಳಿದಂತೆ ನಾವುಗಳು  ಕನಸಗಳನ್ನು ಎಂದಿಗೂ ಮಲಗಲು ಬಿಡಬಾರದು ಅವು ಸದಾ ಜಾಗ್ರತವಾಗಿರಬೇಕು ಆಗ ಬದುಕಿಗೂ ಒಂದು ಅರ್ಥವಿರುತ್ತದೆ  ಆದರೆ ನಾವುಗಳು ಮಾಡುವ ತಪ್ಪೆಂದರೆ  ಸಣ್ಣ ಪುಟ್ಟ ಸವಾಲುಗಳಿಗೆ ಸೋತು ಕನಸುಗಳನ್ನು ಮಲಗಲು ಬಿಡುವುದಿರಲಿ ಸಾಯಿಸಿಯೇ ಬಿಟ್ಟಿರುತ್ತೇವೆ. ಹಾಗಾಗದಿರಲಿ ಕನಸುಗಳು ಸದಾ ಜಾಗ್ರತವಾಗಿರಬೇಕು ಏಕೆಂದರೆ ಕನಸಿನ ಗಮ್ಯವೊಂದೇ ಎಂದಲ್ಲ ಕನಸನ್ನು ನನಸಾಗಿಸುವತ್ತ ಸಾಗುವ ಹಾದಿಯಿದೆಯಲ್ಲ ಅದು ಕೂಡ ಬದುಕನ್ನು ಚೆಂದಗಾಣಿಸುತ್ತದೆ.

 ಕಾರ್ತಿಕ್ ಎಸ್ ಬಾಪಟ್.