Monday, October 21, 2024

 ಮಿಥುನ್ ಪಯಣದ ಹಾದಿ ಪ್ರೇರಣಾದಾಯಕ 

ಅಸಫಲತೆ, ಸಂಘರ್ಷ,ಅವಾಮನ ಹಾಗು ಸೋಲು ಹೀಗೆ ಬದುಕಿನಲ್ಲಿ ಸಾಲು ಸಾಲು ಸೋಲುಗಳನ್ನು ಸವಾಲುಗಳನ್ನು ಎದುರಿಸುವ ಯುವ ಮನಸ್ಸುಗಳು ಕೆಲವೊಮ್ಮೆ ಬದುಕೆಂಬ ಬದುಕಿಗೆ ಕೊಳ್ಳಿ ಇಟ್ಟು ಜೀವ ಹಾಗು ಜೀವನವನ್ನು ಕೈ ಚೆಲ್ಲಿದ ಹಲವಾರು ಉದಾಹರಣೆಗಳಿವೆ. ಅಂತವರೆಲ್ಲರೂ ಒಮ್ಮೆ ಮಿಥುನ್ ಬಣ್ಣದ ಬದುಕಿನ ಪಯಣದ ಹಾದಿಯನ್ನು ಗಮನಿಸಬೇಕು. ಮಿಥುನ್ ಪಯಣಿಸಿದ ಹಾದಿ ನಿಜಕ್ಕೂ ಒಂದು ಪ್ರೇರಣಾ ದಾಯಕ ಸಂಗತಿ. ಮಿಥುನ್ ಅವರಿಗೆ ಚಿತ್ರ ಜಗತ್ತಿನ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅರಸಿ ಬಂದಿದೆ. ರಾಜಕಪೂರ್ ನಂತರ  ಇಂಟರ್ನ್ಯಾಷನಲ್ ಫೇಮ್ ಪಡೆದವರ   ಸಾಲಿನಲ್ಲ ಮಿಥುನ್ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಮಿಥುನ್ ಆಮ್ ಡಿಸ್ಕೋ ಡ್ಯಾನ್ಸರ್ ಎಂದೋ  ಜಿಮ್ಮಿ ಜಿಮ್ಮಿ ಎಂದೋ ಒಂದಿಡೀ ಯುರೋಪ್, ಅಂದಿನ ಸೋವಿಯತ್ ಯೂನಿಯನ್ , ಜಪಾನ್ ಹಾಗು ಭರತ ಖಂಡವನ್ನು ತನ್ನ ತಾಳಕ್ಕೆ ಕುಣಿಸಿದ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದು. ಹೀಗೆ ಪ್ರಪಂಚದ ನಾನಾ ಪ್ರಾಂತ್ಯಗಳಲ್ಲಿ ತನ್ನ ನೃತ್ಯ ಕೌಶಲ್ಯದಿಂದ ಹುಚ್ಚೆದ್ದು ಕುಣಿಸುವಂತೆ ಮಾಡಿದ್ದ ಮಿಥುನರನ್ನು ಬದುಕು ಪ್ರಾರಂಭದಲ್ಲಿ ಇನಿಲ್ಲದಂತೆ ನಾನಾ ಸವಾಲುಗಳ ತಾಳಕ್ಕೆ ಕುಣಿಸಿತ್ತು ಎಂಬುದು ಕೂಡ ಅಷ್ಟೇ ಸತ್ಯ.ಕಾಲೇಜು ದಿನಗಳಲ್ಲಿ ಒಂದು ಬಗೆಯ ಕ್ರಾಂತಿಕಾರಿ ಚಿಂತನೆಗಳಿಂದ ಪ್ರೇರಿತರಾಗಿದ್ದ ಮಿಥುನ್ ಕಾಲ ಕಳೆದಂತೆ ನಕ್ಸಲ್ ಚಿಂತನೆಗಳತ್ತ ಹೊರಳಿದ್ದರು. ಮಿಥುನ್ ಅಂದಿನ  ಕಮ್ಯುನಿಸ್ಟ್ ಹಾಗು ನಕ್ಸಲ್ ನಾಯಕ ಚಾರು ಮಝುಂದಾರ್ ರೊಂದಿಗೆ  ಪ್ರಭಲವಾದ ನಂಟನ್ನು ಹೊಂದಿದ್ದರು ಪರಿಣಾಮವಾಗಿ ನಕ್ಸಲ್ ಚಟುವಟಿಕೆಗಳಲ್ಲಿಯೂ ಭಾಗಿಯಾಗುವ  ಪ್ರಮೇಯಗಳು ಬಂದೊದಗಿದ್ದವು. ಆದರೆ ಪೋಷಕರಿಗೆ ಅದರಲ್ಲಿಯೂ ಅವರ ತಾಯಿಗಂತೂ ಮಿಥುನ್ ಹೊತ್ತು ಗೊತ್ತಿಲ್ಲದೇ ಕಾಣೆಯಾಗುತ್ತಿದ್ದದು ಹೊತ್ತಲ್ಲದ ಹೊತ್ತಿನಲ್ಲಿ ಮನೆ ಸೇರುತ್ತಿದ್ದದ್ದು ಮಿಥುನ್ ಬದುಕಿನ ಬಗ್ಗೆ ಚಿಂತೆಯನ್ನುಂಟು ಮಾಡಿತ್ತು. ಯಾವುದೇ ಕ್ಷಣದಲ್ಲೂ ಪೋಲೀಸರ ಬಂದೂಕಿನ ನಳಿಕೆಯ ಗುಂಡು ಮಿಥುನ್ ಎದೆ ಸೀಳುವ ಸಂಭವವಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಮಿಥುನ್ ಸಹೋದರನ ಸಾವು ಹಾಗು ತಾಯಿಯ ಮಮತೆ ಮಿಥುನ್ ನಕ್ಸಲ್ ವಾದವನ್ನು ಬಿಟ್ಟು ಕೋಲ್ಕತ್ತಾ ನಗರವನ್ನು ತೊರೆಯುವಂತೆ ಮಾಡಿತ್ತು. ಅಂದಿನ ಒಂದು ನಿರ್ಣಯ ಮಿಥುನರನ್ನು ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯವರೆಗೆ ತಂದು ನಿಲ್ಲಿಸಿದೆ.

ನಕ್ಸಲ್ ಚಿಂತನೆ ಹಾಗು ಕೋಲ್ಕತ್ತಾದ ಮಧ್ಯಮವರ್ಗದ ಬದುಕಿನ ಸವಾಲುಗಳು ಒಂದು ಬಗೆಯದಾಗಿದ್ದರೆ  ಮುಂಬೈ ಬದುಕಿನ ಸವಾಲುಗಳೇ ಬೇರೆಯದಾಗಿದ್ದವು ಅಲ್ಲಿ ಇರಲು ಸೂರಿನಿಂದಾದಿಯಾಗಿ ಮಹಾನಗರಿಯ ಒಂಟಿತನದವರೆಗೆ ಬದುಕಿನ ನಾನಾ ಮಜುಲುಗಳು ದರ್ಶನವಾಗುತಿತ್ತು. ಮೊದ ಮೊದಲು ತನ್ನ ನೆಂಟರಿಷ್ಟರ  ಮನೆಯಲ್ಲುಳಿದು ಮುಂಬೈ ಬದುಕಿಗೆ ಆಗ ತಾನೇ ಕಣ್ ತೆರೆಯುತಿದ್ದ ಮಿಥುನ್ ಗೆ ಇನ್ನಿಲದಂತೆ ಕಾಡಿದ್ದು ನಕ್ಸಲ್ ಛಾಯೆಯ ದಿನಗಳು. ನೆಂಟರಿಷ್ಟರು ಹಿಂದಿದ್ದ ನಕ್ಸಲ್ ನಂಟನ್ನು  ಪ್ರಸ್ತಾಪಿಸಿ ಮನೆಗಳಿಂದ ಹೊರದಬ್ಬಿದ್ದರು. ಆದರೆ ಛಲ ಬಿಡದ ಛಲದಂಕ ಮಲ್ಲನಂತೆ ಮಿಥುನ್ ಮುಂಬೈ ಬೇಡಿದ ಎಲ್ಲ ಸುಂಕವನ್ನು ಕಾಲದಿಂದ ಕಾಲಕ್ಕೆ ಕಟ್ಟುತ್ತಾ ನಟನಾಗುವ ಸಂಕಲ್ಪವನ್ನು ಮತ್ತಷ್ಟು ಗಟ್ಟಿಕೊಳಿಸಿಕೊಂಡಿದ್ದರು. ಹಾದಿಯಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಮುಂಬೈ ನಲ್ಲಿ ಹಾಗು ಹೀಗೂ ರಸ್ತೆಗಳಲ್ಲಿ , ಪುಟ್ ಪಾಥಗಳಲ್ಲಿ ಜೀವನ ಕಳೆದು  ಅಲ್ಲಿಯೇ ಕೆಲವು ಸ್ನೇಹಿತರನ್ನು ಸಂಪಾದಿಸಿ  ಮುಂಬೈನ  ಒಂಟಿತನಕ್ಕೆ ಸಡ್ಡು ಹೊಡೆದಿದ್ದರು. ರಾತ್ರಿ 12 ಗಂಟೆಗಳ ವರೆಗೆ ರಸ್ತೆಯಲ್ಲಿ ಅಡ್ಡಾಡಿಕೊಂಡು ಕಾಲ ಕಳೆದು ನಂತರ ಸ್ನೇಹಿತರ ಹಾಸ್ಟೆಲ್ಗಳಲ್ಲಿ ವಾಸವಿದ್ದು ಬೆಳ್ಳಂ ಬೆಳಗ್ಗೆ ನಾಲ್ಕರ ಆಸು ಪಾಸಿನಲ್ಲಿ ಹಾಸ್ಟೆಲ್ನಿಂದ ಹೊರಗೆ ಬಂದು ಹಾಸ್ಟೆಲ್ ಎದುರೇ ಇದ್ದ ಸುಲಭ ಶೌಚಾಲಯಗಳಲ್ಲಿ, ಜಿಂಖಾನದಲ್ಲಿ ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ ಪುಟ್ ಪಾತಗಳಲ್ಲಿ, ಲೋಕಲ್ ರೈಲುಗಳಲ್ಲಿ, ಜುಹೂ ಕಿನಾರೆಯಲ್ಲಿ ಪೆನ್ನು , ಕಾಸೆಮಿಟಿಕ್ಸ್ ಗಳನ್ನೂ ಮಾರಿ ಜೀವನ ಸಾಗಿಸುತ್ತಿದ್ದರು. ಹಾಗಿದ್ದಾಗ್ಯೂ ಗಮ್ಯದೆಡೆಗಿದ್ದ ಲಕ್ಷ್ಯ ಮಾತ್ರ ಬದಲಾಗಿರಲಿಲ್ಲ.   ಅದೇ ಸಮಯದಲ್ಲಿ ಪುಣೆಯ ಎಫ್ ಟಿ ಟಿ (FTTI ) ಫಿಲಂ ಅಂಡ್ ಟೆಲಿವಿಷಿನ್ ಇನ್ಸ್ಟಿಟ್ಯೂಟ್ ಓಫ್ ಇಂಡಿಯಾ ದಲ್ಲಿ ಸೇರಬೇಕೆಂದು ತನ್ನ ಸ್ನೇಹಿತನ ಸಹಾಯದಿಂದ ಅರ್ಜಿ ಸಲ್ಲಿಸಿ ಮನೆಯವರ ಇಚ್ಛೆಯ ವಿರುದ್ಧ ಎಫ್ ಟಿ ಟಿ ನಲ್ಲಿ ಸಂದರ್ಶನ ಕೊಟ್ಟು ಸೀಟು ಗಿಟ್ಟಿಸಿಕೊಂಡಿದ್ದರು. ಆದರೆ ಅಂದು ಎಫ್ ಟಿ ಟಿ ನಲ್ಲಿದವರೆಲ್ಲರೂ ದೊಡ್ಡ ದೊಡ್ಡ ಸ್ಥಾನಗಳಲಿದ್ದವರ ಮಕ್ಕಳು , ದೊಡ್ಡ ದೊಡ್ಡ ನಗರಗಳ ವಿದ್ಯಾರ್ಥಿಗಳು ಅವರೊಡನೆ ಒಡನಾಡುವಾಗ ಮಿಥುನ್ ಕೆಲವೊಮ್ಮೆ ಕುಗ್ಗಿ ಹೋಗುತ್ತಿದ್ದರಂತೆ, ಅದೇ ಕಾರಣಕ್ಕೆ ಹೊಸ ಬಟ್ಟೆಗಳನ್ನು ಹೋಲಿಸಿ ಫೈವ್ ಸ್ಟಾರ್ ಹೋಟೆಲ್ನಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬಂದಿದ್ದರಂತೆ ಅಂದರೆ ಮಿಥುನ್ ತನ್ನ  ಗುರಿ ಮುಟ್ಟಲು ಏನೇನು ಬೇಕೋ ಅದೆಲ್ಲವನ್ನು ಎಷ್ಟೇ ಕಷ್ಟ ಬಂದರು ಮಾಡಿಯೇ ಸಿದ್ದ ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಎಫ್ ಟಿ ಟಿ ನಲ್ಲಿದ್ದ ಬಂಗಾಳಿ ವಿದ್ಯಾರ್ಥಿಗಳನ್ನು ಕಡೆಗಣಿಸಿ ್ಯಾಗಿಂಗ್ ನಂತಹ ಪ್ರಸಂಗಗಳು ನಡೆದಾಗ ಮಿಥುನರಲ್ಲಿ ಬಂಗಾಳಿ ಅಸ್ಮಿತೆ ಜಾಗ್ರತರಾಗಿ ಸಿಡಿದೇಳುತ್ತಿದ್ದರಂತೆ. ಹೀಗೆ ಎಫ್ ಟಿ ಟಿ ನಟನೆಯ ಪಾಠವನ್ನೇನೋ ಕಲಿಸಿತು ಎಫ್ ಟಿ ಟಿ ನಲ್ಲಿ ಕಲಿತವರೆಲ್ಲರೂ ನಟರಾಗಿ ಯೆಶಸ್ವಿಯಾಗಬೇಕೆಂದಿಲ್ಲವಲ್ಲ.

ಎಫ್ ಟಿ ಟಿ ನಂತರದ ದಿನಗಳು  ಅಷ್ಟೇ ಪ್ರಯಾಸದಾಯಕವಾಗಿದ್ದವು ಆದರೆ ಮಿಥುನ್ ರಲ್ಲಿ ಗಮ್ಯದೆಡೆಗಿದ್ದ ಏಕಾಗ್ರತೆ ಬದಲಾಗಿರಲಿಲ್ಲ. ನಾನಾ ಈವೆಂಟ್ಗಳಲ್ಲಿ ಸಿನಿಮಾ ಜಗತ್ತಿನ ಮಂದಿ ಗುರುತಿಸಲಿ ಎಂದೇ ಯಾವ ಅಪೇಕ್ಷೆ ಇಲ್ಲದೆ ಡಾನ್ಸ್ ಮಾಡಿ ಬರುತ್ತಿದ್ದರಂತೆ. ಹಾಗಿರುವಾಗ ಖ್ಯಾತ ತಾರೆ ಹೆಲೆನ್ ಅವರ ಇವೆಂಟ್ ಶುರವಾಗುವ ಮುನ್ನ ಮಿಥುನ್ ಮೂವತ್ತು ನಿಮಿಷಗಳ ಕಾಲ ಭರ್ಜರಿ ಡಾನ್ಸ್ ಪ್ರದರ್ಶನ ಮಾಡಿದ್ದರಂತೆ, ಪರಿಣಾಮ ಸಿನಿಮಾ ಸುದ್ದಿಯನ್ನು ಹಿಡಿದಿಡುವ ಪತ್ರಕರ್ತ ಮಿತ್ರರು ಮಿಥುನ್  ಅವರ ನೃತ್ಯ ಹೆಲೆನ್ ಅವರನ್ನು ಮೀರಿಸುವಂತಿತ್ತು ಎಂದು ಬರೆದಿದ್ದರಂತೆ ಇದು  ಡಿಸ್ಕೋ ಡ್ಯಾನ್ಸರ್ ಖ್ಯಾತಿಯ ನಿರ್ದೇಶಕ ಸುಭಾಷ ಅವರ ಗಮನ ಸೆಳಿದಿತ್ತು. ಆದರೆ ಸುಭಾಷ ತತಕ್ಷಣಕ್ಕೇನು ಅವಕಾಶ ಕೊಟ್ಟಿರಲಿಲ್ಲ. ಮಿಥುನ್ ಮೃಣಾಲ್ ಸೇನ್ ಅವರ ಮೃಗಯ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು ತನ್ನ ಮೊತ್ತ ಮೊದಲ ಚಲನ ಚಿತ್ರದಲ್ಲಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದರುಅಂದು ಮಿಥುನರನ್ನು ಉದ್ದೇಶಿಸಿ ನಿಮಗೆ ರಾಷ್ಟೀಯ ಪುರಸ್ಕಾರ ದೊರೆತಿದೆ ಎಂದು ಹೇಳಿದಾಗ ಮಿಥುನ್ ಪುರಸ್ಕಾರಕ್ಕೆ ಎಷ್ಟು ಸಂಭಾವನೆ ದೊರೆಯಬಹುದು ಎಂದು ಕೇಳಿದ್ದರಂತೆ , ಸಂಭಾವನೆಯೇನಿಲ್ಲ ಎಂದಾಗ  ರಾಷ್ಟೀಯ ಪುರಸ್ಕಾರ ಪಡೆದ ಸಂತೋಷ ಕ್ಷಣ ಮಾತ್ರದಲ್ಲಿ ಮಾಯವಾಗಿತ್ತು. ಪುರಸ್ಕಾರಗಳು ಹಸಿವನ್ನು ನೀಗಿಸುವುದಿಲ್ಲವಲ್ಲ. ಕಾಲ ಕಳೆದಂತೆ ಮಿಥುನ್ ಸಣ್ಣ ಪುಟ್ಟ ಪಾತ್ರದಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮಿಥುನ್ ಅದೃಷ್ಟದ ಬಾಗಿಲು ತೆರೆದಿದ್ದು "ಡಿಸ್ಕೋ ಡ್ಯಾನ್ಸರ್" ಚಿತ್ರದ ಅವಕಾಶ. ಅಂದು ಹೆಲೆನ್ ಅವರ ಈವೆಂಟ್ನಲ್ಲಿ ಮಿಥುನ್ ಬಗ್ಗೆ ಬರೆದಿದ್ದ ಬರವಣಿಗೆಯಿಂದ ಪ್ರಭಾವಿತರಾಗಿದ್ದ ಸುಭಾಷ ಮಿಥುನ್ ರನ್ನು ಕರೆದು ಯು ವಿಲ್ ಬಿ ದಿ  ಡ್ಯಾನ್ಸಿಂಗ್ ಸ್ಟಾರ್ ಓಫ್ ಅವರ್ ನೇಶನ್ ಆಫ್ಟರ್  ದಿಸ್ ಮೂವಿ ಅಂದಿದ್ದರಂತೆ ಅದೇ ಕೊನೆ ಮಿಥುನ್ ಹಿಂದಿರುಗಿ ನೋಡಲಿಲ್ಲ. ತನ್ನ ಬಣ್ಣದ ಬಗ್ಗೆ, ಮಾತನಾಡುವ ಶೈಲಿಯ ಬಗ್ಗೆ ಟೀಕಿಸಿದ್ದ ಹಲವರಿಗೆ ಡಿಸ್ಕೋ ಡ್ಯಾನ್ಸರ್ ಮೂಲಕ ಉತ್ತರ ನೀಡಿದ್ದರು. ನಂತರ ನಡೆದಿದ್ದು ಇತಿಹಾಸ ಒಟ್ಟಿನಲ್ಲಿ ಘಟಾನುಘಟಿ ನಾಯಕರಾದ ಅಮಿತಾಭ್ , ವಿನೋದ್ ಖನ್ನಾ , ಧರ್ಮೇಂದರ್ ಇವರೆಲ್ಲರ ನಡುವೆ ಮಿಥುನ್  ತನಗೊಂದು ವಿಶಿಷ್ಟ ಸ್ಥಾನ ಸೃಷ್ಟಿಸಿಕೊಂಡಿದ್ದರು. ಅಂದು   ಸಾವಲ ರಂಗಕ ಲಡಕಾ  ಕ್ಯಾ ಕರೇಗಾ (ಗೋಧಿ ಬಣ್ಣದ ಹುಡುಗ ಏನು ಮಾಡಿಯಾನು) ಎಂದು ಮೂಗು ಮುರಿದಿದ್ದ ನಿರ್ದೇಶಕರು ಮಿಥುನ್ ಕಾಲ್ ಶೀಟಿಗೆ ದುಂಬಾಲು ಬಿದ್ದಿದ್ದರು.

ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಮುಡಿಗೇರಿದೆ, ಆದರೆ ಕೆಲವರು ಇದರಲ್ಲೂ ರಾಜಕೀಯದ ವಾಸನೆ ಇದೆ ಎಂದು ಗುಲ್ಲೆಬಿಸುತ್ತಿದ್ದಾರೆ, ಒಂದು ವೇಳೆ ಹಾಗಾಗಿದ್ದರು ಮಿಥುನ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅರ್ಹರೆಂಬುದರಲ್ಲಿ ಎರಡು ಮಾತಿಲ್ಲ. ಕೆಲವರು ಧರ್ಮೇಂದರ ಅವರಿಗೆ ಪ್ರಶಸ್ತಿ ಸಿಗಬೇಕಿತ್ತು ಎನ್ನುತ್ತಾರೆ ಆದರೆ ಪ್ರಶಸ್ತಿ ಕೊಡುವಾಗ ಕೆಲವು ನಿರ್ದಿಷ್ಟ ಮಾನದಂಡಗಳಿರುತ್ತವೆ  ಅದು ಕೆಲವೊಮ್ಮೆ ಜನಪ್ರಿಯತೆಯನ್ನು ಮೀರಿ ಕೆಲವು ಅಂಶಗಳನ್ನು ಗಣನೆಗೆ ಪಡೆದುಕೊಳ್ಳುತ್ತದೆ ಅಲ್ಲಿ ಕೆಲವರು ಜನಪ್ರಿಯತೆಯ ಎಲ್ಲೇ ಮೀರಿ ಮುಂದಿರುತ್ತಾರೆ. ಮುಂದೊಂದು ದಿನ ಧರ್ಮೇಂದರ್ ಕೂಡ ಪ್ರಶಸ್ತಿಗೆ ಭಾಜನರಾಗಬಹುದು. ಅಂದ ಹಾಗೆ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಕೂಡ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ವಂಚಿತರಾದವರೆಂದು ಮರೆಯಬಾರದು. ಅದೇನೇ ಇರಲಿ ಮಿಥುನ್ ದಾ ಹೇಳಿದಂತೆ ನಾವುಗಳು  ಕನಸಗಳನ್ನು ಎಂದಿಗೂ ಮಲಗಲು ಬಿಡಬಾರದು ಅವು ಸದಾ ಜಾಗ್ರತವಾಗಿರಬೇಕು ಆಗ ಬದುಕಿಗೂ ಒಂದು ಅರ್ಥವಿರುತ್ತದೆ  ಆದರೆ ನಾವುಗಳು ಮಾಡುವ ತಪ್ಪೆಂದರೆ  ಸಣ್ಣ ಪುಟ್ಟ ಸವಾಲುಗಳಿಗೆ ಸೋತು ಕನಸುಗಳನ್ನು ಮಲಗಲು ಬಿಡುವುದಿರಲಿ ಸಾಯಿಸಿಯೇ ಬಿಟ್ಟಿರುತ್ತೇವೆ. ಹಾಗಾಗದಿರಲಿ ಕನಸುಗಳು ಸದಾ ಜಾಗ್ರತವಾಗಿರಬೇಕು ಏಕೆಂದರೆ ಕನಸಿನ ಗಮ್ಯವೊಂದೇ ಎಂದಲ್ಲ ಕನಸನ್ನು ನನಸಾಗಿಸುವತ್ತ ಸಾಗುವ ಹಾದಿಯಿದೆಯಲ್ಲ ಅದು ಕೂಡ ಬದುಕನ್ನು ಚೆಂದಗಾಣಿಸುತ್ತದೆ.

 ಕಾರ್ತಿಕ್ ಎಸ್ ಬಾಪಟ್.

Thursday, October 10, 2024

 ಸರ್ಕಾರವೆಂಬುದು ವಿಷಕನ್ಯೆಯಂತೆ .

ಇತ್ತೀಚಿಗೆ ನಾಗ್ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಸರ್ಕಾರಗಳ ಭರವಸೆಯಲ್ಲಿ ನಿಮ್ಮ ಉದ್ಯಮಗಳನ್ನು ಸ್ಥಾಪಿಸಬೇಡಿ, ಸ್ವಾವಲಂಬಿ ನೆಲೆ ಗಟ್ಟಿನಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಯಾವುದೆ ಸಬ್ಸಿಡಿ ಅರ್ಥಾತ್ ಸರ್ಕಾರಗಳಿಂದ ಸಹಾಯಧನದ ನೀರಿಕ್ಷೆ ಮಾಡಬೇಡಿ ಎಂದು ಹೇಳಿದಲ್ಲದೆ ವಿಷಯದಲ್ಲಿ ಸರ್ಕಾರಗಳು ವಿಷಕನ್ಯೆ ಇದ್ದಂತೆ ಎಂದೂ ಹೇಳಿದರು. ಅಂದ ಹಾಗೆ ಗಡ್ಕರಿ ಸಾಹೇಬರು ಸರ್ಕಾರಗಳು ವಿಷಕನ್ಯೆಯಂತೆ ಎಂದು ಹೇಳಿದ್ದು ಇದೇ ಮೊದಲೇನಲ್ಲ ಕಳೆದ ವರುಷವು ಹೀಗೆ ಹೇಳಿದ್ದರು ಹಾಗು ಇತ್ತೀಚಿನ ದಿನಗಳಲ್ಲಿ ಗಡ್ಕರಿ ಸಾಹೇಬರು ಯಾವುದೆ ಅವಕಾಶವನ್ನು ಬಿಡದೆ ತಮ್ಮದೇ ಸರಕಾರವನ್ನು ನಿರ್ಭಿಡೆಯಿಂದ ತರಾಟೆ ತೆಗೆದು ಕೊಳ್ಳುತ್ತಿರುವುದು ಹೊಸದೇನಲ್ಲ. ವಿಷಕನ್ಯೆ ಹೇಳಿಕೆಯು ಕೂಡ  ಮಹಾರಾಷ್ಟ್ರದ  ತಮ್ಮದೇ ಸರ್ಕಾರದ ವಿರುದ್ಧವಾಗಿತ್ತು ಎಂಬುದು ಗಮನಾರ್ಹ ಅಂಶ. ಇತ್ತೀಚಿಗೆ  ಮಹಾರಾಷ್ಟ್ರ ಸರ್ಕಾರ  ಮಾಝಿ ಲಾಡಕಿ ಬಹಿನ್ ಎಂಬ ಯೋಜನೆಯನ್ನು ಜಾರಿಗೆ ತಂದಿತು.   ಯೋಜನೆ ಅಡಿಯಲ್ಲಿ ಯಾವ ಕುಟುಂಬದ ಆದಾಯ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಳನ್ನು ಮೀರುವುದಿಲ್ಲವೋ ಅಂತಹ ಕುಟುಂಬದ   21 ರಿಂದ 65 ವರ್ಷ ವಯಸ್ಸಿನ  ಮಹಿಳೆಯರು ತಿಂಗಳಿಗೆ 1500 ರೂಪಾಯಿಗಳನ್ನು ಪಡೆಯಲು ಅರ್ಹರು ಎಂದು ಹೇಳಿತು.  ಹಾಗು  ಯೋಜನೆ ಒಂದರಿಂದಲೇ ರಾಜ್ಯಕ್ಕೆ 46,000 ಕೋಟಿ ರೂಪಾಯಿ ಹೊರೆಯಾಗುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿತ್ತು. ವಿಷಯವನ್ನು ಉದ್ದೇಶಿಸಿಯೇ ಗಡ್ಕರಿ ಸಬ್ಸಿಡಿ ನಿಮಗೆ ಸಿಗಬಹುದು ಆದರೆ ಅದು ನಿಮಗೆ ಎಂದು ತಲುಪೀತು ಎಂದೂ  ಹೇಳಲಾಗದು ಏಕೆಂದರೆ ನಿಮಗಾಗಿ ನಿಮ್ಮ ಉದ್ಯಮಕ್ಕಾಗಿ ತೆಗೆದಿಟ್ಟ ಹಣ ಲಾಡಕಿ ಬಹಿನ್ ಯೋಜನೆಗೆ ಹರಿದು ಹೋದೀತು ಆದ್ದರಿಂದ ಸಬ್ಸಿಡಿ  ಅದು ಬಂದಾಗಲೇ ನಿಜ ಎಂದು ವಾಣಿಜ್ಯೋದ್ಯಮಿಗಳಿಗೆ  ಕಿವಿ ಮಾತು ಹೇಳಿದ್ದರು. ಗಡ್ಕರಿ ಸಾಹೇಬರು ಹೇಳಿದ ಮಾತಲ್ಲಿ ಎಳ್ಳಷ್ಟೂ ತಪಿಲ್ಲ ಆದರೆ ಮಾತನ್ನು ಸದನದ ಒಳಗೆ ಆಡಬೇಕಿತ್ತು, ಆದರದು ಸಾಧ್ಯವಿಲ್ಲ ತಮ್ಮದೇ ಪಕ್ಷದ ನೀತಿ ನಿಯಮಗಳ ಬಗ್ಗೆ ಸೊಲ್ಲೆತ್ತುವಂತಿಲ್ಲ , ಆದರೆ ಗಡ್ಕರಿ ಅಂತಹವರನ್ನು ಯಾರು ತಡೆಯಲು ಸಾಧ್ಯವಿಲ್ಲ ಏನನ್ನು ಹೇಳಬೇಕು ಅದು ಸದನದ ಒಳಗಡೆ ಆಗದಿದ್ದರೆ ಹೊರಗಾದರು ಸರಿ  ಹೇಳಿಯೇ ಸಿದ್ದ.

ಹಾಗೆ ನೋಡಿದರೆ ಗಡ್ಕರಿ ಸಾಹೇಬರು ತಮ್ಮದೇ ಸರ್ಕಾರದ ರೀತಿ ನೀತಿಗಳನ್ನು ತರಾಟೆಗೆ ತೆಗೆದು ಕೊಂಡದ್ದು ಇದೇ ಮೊದಲಲ್ಲ, ವಿತ್ತ ಸಚಿವರಿಗೆ ಹೆಲ್ತ್ ಇನ್ಶೂರೆನ್ಸ್ ಮೇಲೇಕೆ ಜಿ ಯಸ್ ಟಿ ಎಂದು ಕೇಳಿದ್ದರು. ಅದೇ ರೀತಿ ನಾಗ್ಪುರ ದಲ್ಲಿ ನಡೆದ ಸಮಾರಂಭದಲ್ಲಿ ರಾಮದಾಸ್ ಆಠವಲೆ ಅವರನ್ನು ಅವರ ರಾಜಕೀಯ ಚಾಕ ಚಕ್ಯತೆಯನ್ನು ಉದ್ದೇಶಿಸಿ ಮಾತನಾಡುತ್ತ 2029 ರಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆಯೋ ಇಲ್ಲವೋ ಆದರೆ ರಾಮದಾಸ್ ಆಠವಲೆ ಅವರು ಮಾತ್ರ ಮತ್ತೆ ಮಂತ್ರಿ ಆಗುತ್ತಾರೆ ಎಂದು ಹೇಳುವುದರ ಮೂಲಕ ಹಲವರ ನಿದ್ದೆ ಗೆಡಿಸಿದ್ದರು. ಕಳೆದ ತಿಂಗಳು ನಡೆದ ಸಮಾರಂಭದಲ್ಲಂತೂ ನಾವು  ವಿಶ್ವಗುರು ಆಗಬೇಕಾದರೆ   ಸಾಮಾಜಿಕ ಸಾಮರಸ್ಯದ ಹಾದಿ ಹಿಡಿಯಬೇಕು ಎಂದು ಹೇಳಿ ಎಲ್ಲರೂ ಬೆರಗಾಗುವಂತೆ ಮಾಡಿದ್ದರು. ಹಾಗೆಂದು ಯಾರ ಬಗ್ಗೆಯೂ ವಿಷ ಕಾರುವ ಪ್ರವೃತ್ತಿ ಗಡ್ಕರಿ ಅವರದಲ್ಲ ಅವರೇ ಹೇಳುವ ಹಾಗೆ  ನಮ್ಮಲಿ ಅಭಿಪ್ರಾಯ ಭೇದಗಳು ಇರುವುದು ಸಮಸ್ಯೆ ಅಲ್ಲ ಅದನ್ನು ವೈಯುಕ್ತಿಕ ನೆಲೆಗಟ್ಟಿನಲ್ಲಿ  ವಿರೋಧ ಮಾಡುತ್ತಿದ್ದರೆಂದು ಭಾವಿಸಬಾರದು ಏಕೆಂದರೆ  ಮುಂದೊಂದು ದಿನ ನಮ್ಮ ಭಿನ್ನ ಭಿನ್ನ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳದೆ ಇದ್ದರೆ ಅಭಿಪ್ರಾಯದ ಕೊರತೆಯ ಸಮಸ್ಯೆ ಎದುರಾಗಬಹುದು ಎಂದು ತಮ್ಮ ಹೇಳಿಕೆಗಳ ಮರ್ಮವೇನು ಎಂಬುದಕ್ಕೆ ಸಮಜಾಯಿಸಿ ಕೊಟ್ಟಿದ್ದರು. 

ನಿತಿನ್ ಗಡ್ಕರಿ ಅವರ ಕಾಳಜಿ ನಿಜಕ್ಕೂ ಮೆಚ್ಚಬೇಕಾದ್ದೇ , ಅತೀ ಎಂಬಂತೆ ಓಲೈಕೆಯ ರಾಜಕಾರಣಕ್ಕಾಗಿ, ಚುನಾವಣೆ ಗೆಲ್ಲಲೆಂದು ಕೊಡಮಾಡುವ ಗ್ಯಾರಂಟಿಯಿಂದಾಗಿ ಇಂದು ಹಿಮಾಚಲ ಪ್ರದೇಶ ಯಾವ ಪರಿಸ್ಥಿತಿಗೆ ಬಂದು ನಿಂತಿದೆ ಎಂದರೆ  ಸಚಿವರಿಗೆ  2 ತಿಂಗಳ ವೇತನ ಕಡಿತಗೊಳಿಸಿದೆ. ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ಪಿಂಚಣಿ ಕಡಿತಗೊಳಿಸುವ ಮಸೂದೆಯನ್ನೂ ಅಂಗೀಕರಿಸಿದೆ. ಇದೆಲ್ಲದರ ಮಧ್ಯೆ ಹಿಮಾಚಲ ಪ್ರದೇಶ ಸರ್ಕಾರ ಶೌಚಾಲಯ ಆಸನಗಳನ್ನು ಆಧರಿಸಿ ತೆರಿಗೆ ವಿಧಿಸಲು ಮುಂದಾಗಿದೆ ಎಂಬ ವದಂತಿ ಹರಡಿತ್ತು ಆದರೆ ಇದು ನಿಜವಲ್ಲ ಎಂಬ ಸಮಜಾಯಿಷಿಯನ್ನು ಹಿಮಾಚಲ ಪ್ರದೇಶ ಸರ್ಕಾರ ಕೊಡಬೇಕಾಯಿತು. ಹೀಗೆ ಸಬ್ಸಿಡಿ ಗಳನ್ನೂ ಘೋಷಿಸಿ ವೆನಿಝುಲ ಎಂಬ ದೇಶ ಪಾತಾಳಕ್ಕೆ ತಲುಪಿದ್ದು ಯಾವುದೇ  ದೇಶವಿರಲಿ ಅಗತ್ಯಕ್ಕಿಂತ ಹೆಚ್ಚು  ಸಬ್ಸಿಡಿಗಳನ್ನು ಏಕೆ ನೀಡಬಾರದು ಎಂಬುದಕ್ಕೆ ಒಂದು ಸ್ಪಷ್ಟ ನಿದರ್ಶನ ವೆನಿಝುಲ ದೇಶ.  ಅಷ್ಟೇಕೆ ಎರಡೇ ಎರಡು ವರುಷಗಳ ಹಿಂದೆ ಶ್ರೀಲಂಕಾ ಪರಿಸ್ಥಿಯು ಇದೇ ರೀತಿ ಆಗಿತ್ತು ಹಾಗು ಈ ಪರಿಸ್ಥಿತಿಯಿಂದ ಹೊರ ಬರಲು ಶ್ರೀಲಂಕಾ  ಪಡುತ್ತಿರುವ ಪರಿಪಾಟಲು ಎಲ್ಲವೂ ನಮ್ಮ ಕಣ್ ಮುಂದಿದೆ. ಅಂದರೆ ಸರ್ಕಾರಗಳಿಗೆ ತಾವು ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಷ್ಟತೆ ಇರಬೇಕು. ಸರ್ಕಾರಗಳು  ಬಡವ ಬಲ್ಲಿದರ ಹಾಗು ಸಮಾಜದ ಪ್ರತಿ ವರ್ಗಗಳ ಶಾಶ್ವವಾತವಾಗಿ ಬಡತನವನ್ನು ನಿರ್ಮೂಲನೆ ಮಾಡುವ ಯೋಚನೆ ಮಾಡಬೇಕೆ ಹೊರತು ತತಕ್ಷಣಕ್ಕೆ 1500 ರೂಪಾಯಿ ಕೊಟ್ಟೂ ಅಥವಾ ಗ್ರಹ ಲಕ್ಷ್ಮಿ ಯೋಜನೆಗಳಿಂದಲೋ ಜನರನ್ನು ಬಡತನ ರೇಖೆಯಿಂದ ಮೇಲೆತ್ತ ಬಹುದು ಎಂದು ಭಾವಿಸಿದರೆ ಅದು ತಪ್ಪಾದೀತು ಹಾಗು ಅದರಲ್ಲೂ ಚುನಾವಣೆ ಪ್ರಣಾಳಿಕೆಗಳಲ್ಲಿ  ವಿದ್ಯುತ್ ಉಚಿತ , ಗ್ರಹ ಲಕ್ಷ್ಮಿ ಯೋಜನೆ , ಬಸ್ ಪ್ರಯಾಣ ಉಚಿತ ಹೀಗೆ ಇಂತಹ ಪ್ರಲೋಭನೆಯನ್ನುಂಟು ಮಾಡುವ ಅಂಶಗಳೇ ತುಂಬಿದ್ದರೆ ಅದು ಪರೋಕ್ಷವಾಗಿ ಲಂಚದಂತೆ ಕಂಡು ಬರುತ್ತದೆ ಅಲ್ಲದೆ ಶ್ರೀ ಸಾಮಾನ್ಯನ ಮೌಲ್ಯವನ್ನು ಕೇವಲ ಒಂದಿಷ್ಟು ಸಾವಿರ ರೂಪಾಯಿಗಳಲ್ಲಿ ಹಿಡಿದಿಟ್ಟಂತಾಗುತ್ತದೆ ಎಂಬುದನ್ನು ಜನ ಸಾಮಾನ್ಯರು ಅರಿಯಬೇಕು.

ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಕೈಗಾರಿಕಾ ,ವಾಣಿಜ್ಯ ಮತ್ತು ಕೃಷಿ ಬೆಳವಣಿಗೆಗಳನ್ನು ಉತ್ತೇಜಿಸುವ ನೀತಿಗಳನ್ನು ಜಾರಿಗೊಳಿಸುವುದು  ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆಗಳನ್ನು ಉತ್ತೇಜಿಸುವುದು ಇಂತಹ ಸಮಗ್ರ ನೀತಿಗಳನ್ನು ಅಳವಡಿಸುವದರತ್ತ ಗಮನಿಸಬೇಕು. ಹಾಗೆ ಮಾಡುವುದರಿಡ್ನ  ದೇಶದ ಕಟ್ಟ ಕಡೆಯ ಪ್ರಜೆಯನ್ನು ತಲುಪಬಹುದು. ಇದಕ್ಕೆ ಸೂಕ್ತ ನಿದರ್ಶನವೆಂದರೆ  ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸರ್ಕಾರಗಳು ಕೊಟ್ಟ ಆದ್ಯತೆ ಹಾಗು ಕಲ್ಪಿಸಿದ ಮೂಲ ಸೌಕರ್ಯ. ಕರ್ನಾಟಕದಲ್ಲಂತೂ ಕರ್ನಾಟಕ ಸರ್ಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಟ್ಟ ಉತ್ತೇಜನದಿಂದಾಗಿ  ಇಡೀ ಪ್ರಪಂಚದಲ್ಲಿ ಇಂದು  ಮಾಹಿತಿ ತಂತ್ರ ಜ್ಞಾನ ಕ್ಷೇತ್ರದಲ್ಲಿ  ಬೆಂಗಳೂರು ತನ್ನದೇ  ಸ್ಥಾನವನ್ನು ಕಂಡು ಕೊಂಡಿದೆ ಅಷ್ಟೇ ಅಲ್ಲ  ಮಾಹಿತಿ ತಂತ್ರ ಜ್ಞಾನದೊಂದಿಗೆ ಸಂಬಂಧಿತ ಹಾಗು ಪೂರಕ ಉದ್ಯೋಗಗಳು ತಲೆ ಎತ್ತಿವೆ.  ಬಡತನದ ಬೇಗೆಯಿಂದ ಜನರನ್ನು ಮೇಲೆತ್ತಬೇಕೆಂದರೆ ಸರ್ಕಾರಗಳು ಹೊಸದಾಗಿ ಏನನ್ನು ಮಾಡುವ ಅವಶ್ಯಕೆತೆಯಿಲ್ಲ ಈಗಿರುವ  ಯೋಜನೆಗಳನ್ನೇ ಸಮರ್ಪಕವಾಗಿ ಕಾರ್ಯಗತ ಗೊಳಿಸಿದರೆ ಸಾಕು ಯಾವ ರಾಜ್ಯಗಳಿಗೂ ಹೊಸ ಹೊಸ ಯೋಜನೆಗಳ ಅವಶ್ಯಕತೆಯಿಲ್ಲ. ಮೊದ ಮೊದಲು ಬಿ ಜೆ ಪಿ  ಪಾರ್ಟಿ ವಿಥ್ ಡಿಫರೆನ್ಸ್ , ಪಾರ್ಟಿ ಫಾರ್ ಡೆವಲಪ್ಮೆಂಟ್ ಎಂದು ಹೇಳಿಕೊಂಡು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು ನಿಜ ಆದರೆ ಬಿ ಜೆ ಪಿ ಎಂಬ  ಬಿ ಜೆ ಪಿ ಕೂಡ ಮಹಾರಾಷ್ಟ್ರ ಗೆಲ್ಲಲ್ಲು ಲಾಡಕಿ ಬೆಹನ್ ನಂತಹ ಯೋಜನೆಗಳನ್ನು ಹಮ್ಮಿಕೊಳ್ಳುತ್ತದ್ದೆ ಎಂದರೆ ಇದು ಪಕ್ಷಾತೀತ ಪಿಡುಗು. ಹಾಗಾದಾಗ ಭವಿತವ್ಯದ ದೃಷ್ಟಿಯಿಂದ  ಯಾರಾದರೊಬ್ಬರು ಮಾತಾಡಲೇ ಬೇಕು ಆ ಕೆಲಸವನ್ನು  ಆಗಿಂದಾಗೆ ಗಡ್ಕರಿ ಮಾಡುತ್ತಿದ್ದಾರೆ. ಇದು ಕೆಲವರಿಗೆ ಮೋದಿ ಹಾಗು ಗಡ್ಕರಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬಂತೆ ತೋರಬಹುದು , ಆದರೆ ಗಡ್ಕರಿ ಇರುವುದೇ ಹಾಗೆ ಗಡ್ಕರಿ ಮೋದಿ ಅವರ ಜಾಗದಲ್ಲಿ  ಇನ್ಯಾರಾದರೂ ಪ್ರಧಾನಿ ಆಗಿದ್ದರು ಇದನ್ನೇ ಮಾಡುತ್ತಿದ್ದರು. ನೀವೇ ನೋಡಿ ಗಡ್ಕರಿ ಮಾತನಾಡುವಾಗ ಒಬ್ಬ ರಾಜಕೀಯ ನಾಯಕನಿಗಿಂತ ಹೆಚ್ಚಾಗಿ ವ್ಯಾಪಾರ ಕುಶಾಗ್ರಮತಿ ಉಳ್ಳ ವಾಣಿಜ್ಯೋದ್ಯಮಿಯೋ ಅಥವಾ ಚತುರ ರಾಜತಾಂತ್ರಿಕ ನೈಪುಣ್ಯತೆ ಉಳ್ಳ ನಿಪುಣ ವ್ಯಕ್ತಿ  ಮಾತನಾಡಿದಂತೆ ಭಾಸವಾಗುತ್ತದೆ. ಗಡ್ಕರಿ ಅವರ ಈ ಗುಣವೇ ಅವರನ್ನು ಆಳುವ ಪಕ್ಷದಲ್ಲಷ್ಟೇ ಅಲ್ಲ ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳನ್ನು ಹುಟ್ಟು ಹಾಕುವಂತೆ ಮಾಡಿದೆ, ಇದೇ ಕಾರಣಕ್ಕಾಗಿ ಗಡ್ಕರಿ ಏನು ಮಾಡಿದರು ಸುದ್ದಿಯಾಗುತ್ತಾರೆ. ಅವಕಾಶ ಸಿಕ್ಕರೆ ಮುಂದೊಂದು ದಿನ ಪ್ರಧಾನಿಯೂ ಆಗಲಿ ಎಂದು ಬಯಸುತ್ತಾರೆ.  ಆ ಸುದ್ದಿಯನ್ನು ಆಯಾ ಕಾಲಕ್ಕೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಮಾಧ್ಯಮಗಳು ಹಾಗು ಜನ ಸಾಮಾನ್ಯರು ಅರ್ಥೈಸಿಕೊಳ್ಳುತ್ತಾರೆ.

ಕಾರ್ತಿಕ್ ಎಸ್ ಬಾಪಟ್