ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯ ಹೊಸ್ತಿಲಲ್ಲಿ , ಬದಲಾವಣೆಯ ಸಿಹಿಗಾಳಿ.
ನೀವು ಬೆಂಗಳೂರಿನಲ್ಲಿದ್ದು ಅದರಲ್ಲೂ ಬಸವನಗುಡಿ , ವಿಜಯನಗರ, ಮಲ್ಲೇಶ್ವರ ಹಾಗು ರಾಜಾಜಿನಗರದ ಭಾಗದಲ್ಲಿ ಇದ್ದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಆಗು ಹೋಗುಗಳ ಬಗ್ಗೆ ಆಗಾಗೇ ಕೇಳಿರುತ್ತೀರಿ, ಆದರೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೆಲಸ ಕಾರ್ಯಗಳು ಬಸವನಗುಡಿ ದಾಟಿ ಸದ್ದು ಮಾಡಿದ್ದು ಬಹಳ ಕಡಿಮೆ, ಇದೆಲ್ಲದಕ್ಕೂ ವ್ಯತಿರಿಕ್ತವೆಂಬಂತೆ ಈ ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಪ್ರಪ್ರಥಮ ಬಾರಿಗೆ ಬಸವನಗುಡಿಯ ಬೇಲಿ ದಾಟಿ ಕರ್ನಾಟಕದಾದ್ಯಂತ ಆರೋಗ್ಯಕರ ಚರ್ಚೆ ಮತ್ತು ಚಿಂತನೆಗಳಿಗೆ ನಾಂದಿ ಹಾಡಿದೆ , ಹಾಗು ಹೀಗೊಂದು ಸಂಘಟನೆಯು ಉಂಟು ಎಂಬ ಮನವರಿಕೆ ಅದೆಷ್ಟೋ ಬ್ರಾಹ್ಮಣ ಸಂಘ ಸಂಸ್ಥೆಗಳಿಗೆ ಸಮುದಾಯಕ್ಕೆ ಪ್ರಪ್ರಥಮವಾಗಿ ಮನವರಿಕೆಯಾಗಿದೆ ಎಂದರೆ ತಪ್ಪಿಲ್ಲ. ಇದು ನಿಜಕ್ಕೂ ಗಮನಾರ್ಹ, ಹೀಗಾಗಲು ಕಾರಣ ಶ್ರೀಯುತ ಅಶೋಕ ಹಾರನಹಳ್ಳಿ ಎಂದರೆ ತಪ್ಪಾಗಲಾರದು , ಅದು ಅವರಿಗಿರುವ ಗರಿಮೆ ಮತ್ತು ಅವರ ಹಿರಿಯರಿಂದ ಬಂದ ಬಳುವಳಿಯೂ ಹೌದು , ಇವರ ತಂದೆ ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ಅವರ ರಾಜಕೀಯ ಚಿಂತನಾ ಲಹರಿ , ಸಾಹಿತ್ಯ ಪ್ರೇಮ, ಸಂಘಟನಾ ಕೌಶಲ್ಯ , ಗ್ರಾಮೀಣ ಪ್ರೇಮ , ಸದಾ ಸಮಾಜ ಮತ್ತು ಜನಾಂಗದ ಶ್ರೇಯೋಭಿವೃದ್ಧಿಗಾಗಿ ತುಡಿಯುವ ಗುಣಗಳನ್ನು ಹೊಂದಿದ್ದರು. ಇವೆಲ್ಲ ಕೌಶಲ್ಯಗಳು ಅಶೋಕ ಹಾರನಹಳ್ಳಿಯವರಿಗೆ ಬಳುವಳಿಯಾಗಿ ಬಂದಿದೆ. ರಾಜಕೀಯ ಪ್ರವೇಶದ ಅವಕಾಶಗಳಿದ್ದಾಗ್ಯೂ ಅವೆಲ್ಲವನ್ನು ಬದಿಗೊತ್ತಿ ಆಯ್ಕೆ ಮಾಡಿಕೊಂಡಿದ್ದು ವಕೀಲ ವೃತ್ತಿ ಮತ್ತು ರಾಜಕೀಯೇತರ ಸಮಾಜ ಸೇವೆ.ಇತ್ತೀಚಿಗೆ ಬದಲಾದ ಸನ್ನಿವೇಶದಲ್ಲಿ (On 2nd July 2021) ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅನಿವಾರ್ಯವಾಗಿ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸರ್ವಸಮ್ಮತವಾಗಿ ಸೂಚಿತವಾದ ಹೆಸರು "ಶ್ರೀ ಅಶೋಕ ಹಾರನಹಳ್ಳಿ". ಹಾಗಾದರೆ ಈಗೇಕೆ ಚುನಾವಣೆ ಎಂದರೆ ? ಪ್ರತಿ ಮೂರು ವರ್ಷಗಳ ನಂತರ ಈ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳಾಗಬೇಕು.
ಕಾರ್ತಿಕ್ ಎಸ್ ಬಾಪಟ್
ಹವ್ಯಾಸಿ ಲೇಖಕ.



No comments:
Post a Comment